ನಾಗಮಂಗಲ ಪುರಸಭೆ ವ್ಯಾಪ್ತಿಯಲ್ಲಿ 17 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸೋಮವಾರ ಶಾಸಕ ಸುರೇಶ್ ಗೌಡ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಗಮಂಗಲ ಪಟ್ಟಣವು ಪಟ್ಟಣ ಪಂಚಾಯತಿಯಿಂದ ಪುರಸಭೆಗೆ ಮೇಲ್ದರ್ಜೆಗೇರಿದೆ.ಹಾಗಾಗಿ ಪುರಸಭೆಗೆ ಸೇರಿದ ಸುತ್ತಮುತ್ತ ಹಳ್ಳಿಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ಒಟ್ಟು 17 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾಲದಲ್ಲಿ ವಿಶೇಷ ಅನುದಾನ ನೀಡಿದ್ದು,ಅದು ಅನುಮೋದನೆಗೊಂಡು ಒಟ್ಟು 23 ವಾರ್ಡುಗಳಲ್ಲಿ ಯಾವುದೇ ತಾರತಮ್ಯ ಮಾಡದೆ ಬಂದಿರುವಂತಹ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಪುರಸಭೆಗೆ ಸೇರಿದ ಸುತ್ತಮುತ್ತಲ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯದ ಕೊರತೆಯಿದ್ದು,ಅಲ್ಲಿಗೆ ವಿಶೇಷ ಅನುದಾನದ ಮೂಲಕ ವಾರ್ಡುಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಆಶಾ ವಿಜಯಕುಮಾರ್, ಸದಸ್ಯರಾದ ಚನ್ನಪ್ಪ, ವಿಜಯಕುಮಾರ್, ಪ್ರಭಾಕರ್,ಜಾಫರ್, ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಡಿ. ಟಿ. ಶ್ರೀನಿವಾಸ್, ಮುಖಂಡರಾದ ಗೋವಿಂದ, ಕೆಂಪೇಗೌಡ, ನಾರಾಯಣ್ ಮತ್ತಿತರರಿದ್ದರು.