ಭೂಮಿ ಮತ್ತು ಪರಿಸರದ ಉಳಿವು ಹಾಗೂ ಮನುಕುಲದ ಆರೋಗ್ಯಕ್ಕಾಗಿ ಸಾವಯವ ಕೃಷಿ ಅಳವಡಿಕೆ ಮಾಡಿಕ್ಕೊಳ್ಳಲು ಸಾವಯವ ಕೃಷಿಕ ಸೊಳ್ಳೆಪುರ ಚಂದ್ರಶೇಖರ್ ಸಲಹೆ ನೀಡಿದರು.
ಮದ್ದೂರು ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದ ಶ್ರೀಕಂಠೇಶ್ವರ ಪ್ರೌಡಶಾಲೆಯಲ್ಲಿ ಏರ್ಪಡಿಸಿದ್ದ ಸಾವಯವ ಕೃಷಿ ಮಹತ್ವ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಾಲೆ ಮತ್ತು ಮನೆಯಲ್ಲಿ ಕೈತೋಟ ಮಾಡಿ ಸಾವಯವ ಪದ್ದತಿ ಅಳವಡಿಸಿಕ್ಕೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಪರಿಸರದ ಆರೋಗ್ಯದ ಜೊತೆಗೆ ತಮ್ಮ ಆರೋಗ್ಯ ಕಾಯ್ದುಕೊಳ್ಳಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಇದಕ್ಕೆ ಪರಿಹಾರವು ಸಾವಯವ ಕೃಷಿ ಹಾಗೂ ಸಹಜ ಕೃಷಿಯಾಗಿದೆ ಎಂದರು.
ಶಿಕ್ಷಕರು ಶಾಲೆ ಕೈತೋಟ ನಿರ್ವಹಣೆ ಹಂತದಿಂದಲೆ ವಿಧ್ಯಾರ್ಥಿಗಳಿಗೆ ಸಾವಯವ ಕೃಷಿ ಪರ ಒಲವು ಬೆಳೆಸಬೇಕು. ಮನೆ ಹಾಗೂ ಶಾಲೆಯಲ್ಲಿನ ತ್ಯಾಜ್ಯಗಳ ವಿಂಗಡಣೆ ಮಾಡಿ ಹಸಿಕಸ, ಒಣಕಸ ಗಳ ವಿಂಗಡಣೆ ಮಾಡುವ ಮೂಲಕ ಗೊಬ್ಬರ ತಯಾರಿಕೆ ಮತ್ತು ಬಯೊಗ್ಯಾಸ್ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಬೇಕೆಂದರು.
ಮುಖ್ಯ ಶಿಕ್ಷಕರಾದ ಶಿವಕುಮಾರ್, ಶಿಕ್ಷಕರಾದ ಶಶಿಕುಮಾರ್, ಗಂಗಾಧರ್, ಉಮೇಶ್, ಉಷಾ, ತಿಪ್ಪೇಸ್ವಾಮಿ ನಂಜುಂಡಸ್ವಾಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.