ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿದರೂ ಜೆಡಿಎಸ್ ನಾಯಕರು, ಹಾಸನಕ್ಕೆ ಅಭಿವೃದ್ದಿ ಮಾಡಿಕೊಂಡರೆ ಹೊರತು ಮಂಡ್ಯಕ್ಕೆ ಮೋಸ, ವಂಚನೆ ಮಾಡಿ ಅಭಿವೃದ್ದಿಯಲ್ಲಿ ಹಿಂದುಳಿಯುವಂತೆ ಮಾಡಿದ್ದಾರೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.
ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಹಲ್ಲೇಗೆರೆಯಲ್ಲಿ ಬುಧವಾರ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಅವರು ಒಂದು ದಿನವು ಉತ್ತಿಲ್ಲ, ಭಿತ್ತಿಲ್ಲ, ಆದರೂ ಮಣ್ಣಿನ ಮಕ್ಕಳಂತೆ. ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನವನ್ನು ಕೊಟ್ಟರೂ ಏಕೆ ಅಭಿವೃದ್ಧಿ ಮಾಡಲಿಲ್ಲ ? ಈಗ ಮತ್ತೆ ಅದೇ ಸುಳ್ಳು ಅಶ್ವಾಸನೆಗಳ ಮೂಲಕ ಪಂಚರತ್ನ ಯಾತ್ರೆ ಮಾಡಿ ಜನರನ್ನು ಯಾಮಾರಿಸಲು ಬಂದು ಹೋದರು ಎಂದು ಟೀಕಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು 2 ಬಾರಿ ಸಿಎಂ ಆಗಿದ್ದರೂ ಆದರೆ ಮಂಡ್ಯಕ್ಕೆ ಅವರ ಕೊಡುಗೆ ಏನು ? ಮಾತೆತ್ತಿದ್ದರೆ ಜಿಲ್ಲೆಗೆ 8,000 ಕೋಟಿ ಬಿಡುಗಡೆ ಮಾಡಿದ್ದೆ, ಅದನ್ನು ವಾಪಸ್ ತಗೊಂಡ್ರು ಅಂತಾ ಹೇಳ್ತಾರೆ, ಆದ್ರೆ ಇವರು 37 ಶಾಸಕರಿದ್ರು ಒಂದು ದಿನವಾದರೂ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಒಕ್ಕಲಿಗರಿದ್ದಾರೆ, ಕೂಲಿಕಾರರಿದ್ದಾರೆ ಅವರಿಗಾಗಿ ಜೆಡಿಎಸ್ ನಾಯಕರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ, ಹಿಂದೆ ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಅವರು ಟೆಕ್ನಾಲಜಿಗೆ ಬಗ್ಗೆ ಮಾತನಾಡಿದಾಗ ನಗುತ್ತಿದ್ದರು, ಆದರೆ ಇಂದು ಜಗತ್ತಿನ ಇತರೆ ದೇಶಗಳ ಮುಂದೆ ಭಾರತವು ತಂತ್ರಜ್ಞಾನದಲ್ಲಿ ಸರಿಸಮವಾಗಿ ನಿಲ್ಲುವಂತಾಗಿದೆ, ಇಂದು ಭಾರತ ಇಷ್ಟು ಮುಂದುವರಿಯಲು ರಾಜೀವ್ ಗಾಂಧಿ ಅವರ ಕೊಡುಗೆ ಮಹತ್ವದಾಗಿದೆ ಎಂದರು.
ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ 73ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳನ್ನು ಮಹಿಳೆಯರಿಗೆ ಸಮಪಾಲು ನೀಡಲಾಯಿತು, ಅವರ ಮುಂದಾಲೋಚನೆಯಿಂದಾಗಿ ಇಂದು ಮಹಿಳೆಯರು ರಾಜಕೀಯ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ ಎಂದು ಸ್ಮರಿಸಿದರು. ಕಾಂಗ್ರೆಸ್ ಅವದಿಯಲ್ಲಿ ಸ್ತ್ರೀಶಕ್ತಿ ಸಂಘಗಳನ್ನು ರಚನೆ ಮಾಡಲಾಯಿತು, ಇದರಿಂದಾಗಿ ಸ್ತ್ರೀಶಕ್ತಿ ಸಂಘಗಳ ಆರ್ಥಿಕವಾಗಿ ಅಭಿವೃದ್ದಿ ಹೊಂದುತ್ತಿವೆ ಎಂದು ಹೇಳಿದರು.