ಕುಷ್ಠರೋಗಿಗಳು ಯಾವುದೇ ಅಳಕು ಇಲ್ಲದೇ ಸಮಾಜದಲ್ಲಿ ಎಲ್ಲರಂತೆ ಜೀವನ ನಡೆಸಲು ಸರ್ಕಾರ ನೀಡುವ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಪಿ.ಅಶ್ವಥ್ ತಿಳಿಸಿದರು.
ಶ್ರೀರಂಗಪಟ್ಟಣದ ರಂಗನಾಥನಗರದ ಲೆಪ್ರಸಿ ಕಾಲೋನಿಯಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನ ಕಚೇರಿ ಮಂಡ್ಯ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಶ್ರೀರಂಗಪಟ್ಟಣದ ವತಿಯಿಂದ ಕುಷ್ಠರೋಗದಿಂದ ಗುಣಮುರಾಗಿ ಅಂಗವೈಕಲ್ಯ ಹೊಂದಿರುವವರಿಗೆ ಅನುಕೂಲವಾಗುವ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಷ್ಠರೋಗಿಗಳು ಸರಕಾರ ಒದಗಿಸುವ ಎಲ್ಲಾ ಸವಲತ್ತುಗಳ ಪ್ರಯೋಜನ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಕುಷ್ಠರೋಗದಿಂದ ವಿಕಲಚೇತನರಾದವರಿಗೆ ಎಂ ಸಿ ಆರ್ ಚಪ್ಪಲಿ, ವೈದ್ಯಕೀಯ ಸಲಕರಣೆ ಕಿಟ್, ಊರುಗೋಲು ಮುಂತಾದವುಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗೋವಿಂದರಾಜು,, ಆರೋಗ್ಯ ನಿರೀಕ್ಷಣಾಧಿಕಾರಿ ಚಿಕ್ಕರಸೇಗೌಡ, ಎಂ ಸಿ ಚಂದನ, ಕೃಷ್ಣೇಗೌಡ, ನಮ್ಮ ಕ್ಲಿನಿಕ್ ವೈದ್ಯರಾದ ಡಾ.ಮೊಹಮ್ಮದ್ ಶಿರಾನ್, ಶುಶ್ರೂಷನಾಧಿಕಾರಿ ಕೋಮಲ, ಪ್ರಯೋಗ ಶಾಲೆಯ ಹರೀಶ್, ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಸೇರಿದಂತೆ ಇತರರು ಹಾಜರಿದ್ದರು.