ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲು ಗ್ರಾಮದ ಗ್ರಾ.ಪಂ.ಸದಸ್ಯೆ ರೂಪ ಕುಮಾರ್ ಅವರು ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ಜಾನಕಿರಾಮ್ ಮತ್ತು ಜೆಡಿಎಸ್ ನಾಯಕ ಎಚ್.ಟಿ. ಮಂಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಯಾದರು.
ರೂಪಾ ಅವರಿಗೆ ಜೆಡಿಎಸ್ ಪಕ್ಷದ ಶಾಲು ಹೊದಿಸಿ ಸಿಹಿ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಎ.ಎನ್.ಜಾನಕಿರಾಮ್, ನಮ್ಮ ಪಕ್ಷದ ಸಿದ್ದಾಂತ, ಜನಪರ ಕಾಳಜಿ ಹಾಗೂ ಯೋಜನೆಗಳ ಮೆಚ್ಚಿ ತಾಲೂಕಿನಲ್ಲಿರುವ ಇತರೆ ಪಕ್ಷಗಳ ಹಲವು ಹಿರಿಯ ಮುಖಂಡರು, ಯುವಕರು ಸೇರ್ಪಡೆಯಾಗುತ್ತಿದ್ದಾರೆ. ಅದರಂತೆ ಈ ದಿನ ಆಲಂಬಾಡಿ ಕಾವಲು ಗ್ರಾಮದ ರೂಪ ಕುಮಾರ್ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದು ಬಹಳದ ಸಂತಸದ ವಿಷಯ ಎಂದರು.
ಕೆ.ಆರ್.ಪೇಟೆ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಮಾತನಾಡಿ, ರೂಪಾ ಕುಮಾರ್ ಅವರು ನಮ್ಮ ಪಕ್ಷದ ಸಿದ್ಧಾಂತ ನಂಬಿ ಸೇರ್ಪಡೆಗೊಂಡಿದ್ದಾರೆ. ಅವರನ್ನು ಗೌರವಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಅವರ ಅಭಿವೃದ್ಧಿ ಕೆಲಸಕ್ಕೆ ಸಹಕಾರಿಯಾಗುವೆ. ಮುಖಂಡ ಕುಮಾರ್ ಮಾತನಾಡಿ, ತಮ್ಮ ಸ್ವ ಇಚ್ಛೆಯಿಂದ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದೇನೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದು ಎಚ್ ಟಿ ಮಂಜು ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಮೋಹನ್, ಹಿರಿಯ ಮುಖಂಡ ಹುಲ್ಲೇಗೌಡ, ಜೆಡಿಎಸ್ ಮುಖಂಡ ಪೂವನಹಳ್ಳಿ ರೇವಣ್ಣ, ತಾಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ತನ್ವೀರ್ ಪಾಷಾ, ಮಂಜು,ಶ್ರೀನಿವಾಸ್, ಎಚ್ ಟಿ ಲೋಕೇಶ್, ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.