ಮುಂಬರುವ ಚುನಾವಣೆಯಲ್ಲಿ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜನತಾದಳ(ಯು) ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿರುವುದಾಗಿ ತಾ.ಪಂ.ಮಾಜಿ ಸದಸ್ಯ ರಾಜಾಹುಲಿ ದಿನೇಶ್ ತಿಳಿಸಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದಲ್ಲಿರುವ ಗೋ ರಕ್ಷಕ ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ನಾನು ತಾಲ್ಲೂಕು ಪಂಚಾಯಿತಿ ಸದಸ್ಯನಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಹೋಬಳಿಯ ಎಲ್ಲಾ ಶಾಲೆ-ಕಾಲೇಜಿನ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈಲಾದ ಸೇವೆ ಮಾಡಿದ್ದೇನೆ. ಇದಲ್ಲದೆ ನನ್ನ ತಾಯಿ ಗ್ರಾ.ಪಂ.ಸದಸ್ಯರಾಗಿ, ಎಪಿಎಂಸಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಕುಟುಂಬವು ಸದಾ ತಾಲ್ಲೂಕಿನ ಜನರ ಸೇವೆಗಾಗಿ ಕೆಲಸ ಮಾಡುತ್ತಿದೆ ಎಂದರು
ಇದಲ್ಲದೆ ಗವಿರಂಗನಾಥ ಶ್ರೀಕ್ಷೇತ್ರದಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಕ್ಷೇತ್ರಕ್ಕೆ ಭಕ್ತಾಧಿಗಳ ಆಕರ್ಷಣೆ ಮಾಡಿದ್ದೇನೆ. ಇದು ತಾಲ್ಲೂಕಿನ ಜನರು ನನ್ನನ್ನು ಗುರುತಿಸಲು ಸಹಕಾರಿಯಾಗಿದೆ. ನಾನು ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವುದನ್ನು ಸಹಿಸದೆ ಕೆಲವರು ತೊಂದರೆ ನೀಡಿದರು. ಆದರೂ ನಾನು ಹಿಂದೆ ಇದ್ದ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದೇನೆ. ಆದರೆ ಕೆಲ ಕಾರಣಗಳಿಂದ ಪಕ್ಷ ತೊರೆದು ರಾಜಕೀಯದಿಂದ ದೂರ ಉಳಿದಿದ್ದೆನು. ಆದರೆ ತಾಲ್ಲೂಕಿನ ಹಲವಾರು ಗ್ರಾಮಗಳ ನನ್ನ ಸ್ನೇಹಿತರು, ಬೆಂಬಲಿಗರು, ಅಭಿಮಾನಿಗಳು, ನೀವು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕು ನಮ್ಮಲ್ಲೆರ ಬೆಂಬಲ ನಿಮಗೆ ಸದಾ ಇರುತ್ತದೆ ಎಂದು ಒತ್ತಡದ ಮೇರೆಗೆ ನಾನು ಇಂದು ಗವಿರಂಗನಾಥ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬೇಲದಕೆರೆ ಹರೀಶ್, ಕೊರಟೀಕೆರೆ ಕೃಷ್ಣಣ್ಣ, ಹರಿಹರಪುರ ದರ್ಶನ್, ಮಡುವಿನಕೋಡಿ ಭರತ್, ನಾರಾಯಣಪುರ ಅಭಿ, ಪ್ರತಾಪ್, ಅಘಲಯ ಸಚಿನ್, ರವಿಯಣ್ಣ, ಸಂತೇಬಾಚಹಳ್ಳಿ ಸೋಮಶೇಖರ್, ಯಲಾದಹಳ್ಳಿ ಗಣೇಶ್, ಸಂತೋಷ್, ಸುರೇಶ್, ಕುಂದೂರು ವಿನೋದ್ಕುಮಾರ್, ದಿನೇಶ್, ಕಿರಣ್, ವೆಂಕಟೇಶ್, ಸತೀಶ್, ಮನು, ಪ್ರಸನ್ನ, ಸೇರಿದಂತೆ ನೂರಾರು ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.