ಪ್ರಜಾಟಿವಿಯ ವರದಿಗಾರರೆಂದು ಹೇಳಿಕೊಂಡು ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದ ಎಟಿಎಂ ರೈಸ್ ಮಿಲ್ ಗೆ ಅಕ್ರಮವಾಗಿ ಪ್ರವೇಶ ಮಾಡಿ, 5 ಲಕ್ಷ ರೂ.ಗಳ ಹಣವನ್ನು ನೀಡುವಂತೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐವರ ಮೇಲೆ ಎಫ್ಐಆರ್ ದಾಖಲಾಗಿದೆ.
ಎಟಿಎಂ ರೈಸ್ ಮಿಲ್ಲಿನ ಮಾಲೀಕ ಜ್ಞಾನೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಜಾ ಟಿವಿಯ ವರದಿಗಾರರೆಂದು ಹೇಳಿಕೊಂಡಿರುವ ಅರುಣ್ ಪ್ರಸಾದ್ ಜಿ.ಬಿ., ಮುನಿರಾಜು ಹಾಗೂ ಕಿರಣ್ ಸೇರಿದಂತೆ ಇನ್ನಿಬ್ಬರ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಎಫ್ಐಆರ್ ವಿವರ
ಕಳೆದ ಜ.27 ರಂದು ರಾತ್ರಿ 7 ಗಂಟೆಯ ಸಮಯದಲ್ಲಿ (ಕೆ ಎ-04-ಎಸ್ ಬಿ -5083) ಕಾರಿನಲ್ಲಿ ಬಂದ ಐವರು ವ್ಯಕ್ತಿಗಳು, ನಂತರ ಎಟಿಎಂ ರೈಸ್ ಮಿಲ್ ಗೆ ಅಕ್ರಮವಾಗಿ ಪ್ರವೇಶ ಮಾಡಿ, ‘ ನೀವು ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡಿರುತ್ತೀರಿ, ನಾವು ಪ್ರಜಾ ಟಿ ವಿ ಸಂಪಾದಕರು, ವರದಿಗಾರರು, ನಿಮ್ಮ ಮೇಲೆ ಪೊಲೀಸ್ ಕೇಸ್ ಹಾಕಿಸಿ ಜೈಲಿಗೆ ಹಾಕಿಸುತ್ತೇವೆ’ ಎಂದು ಧಮ್ಕಿ ಹಾಕಿದರು. ಅದಕ್ಕೆ ‘ನಾವು ನಮ್ಮ ರೈಸ್ ಮಿಲ್ ನಲ್ಲಿ ಯಾವುದೇ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಣಿ ಮಾಡುತ್ತಿಲ್ಲ ಎಂದು ಹೇಳಿದೆವು’ ನಂತರ ಜಿ.ಬಿ.ಅರುಣ್ ಪ್ರಸಾದ್ ಎಂಬುವವನು ‘ನಿಮ್ ಕಥೆ ಎಲ್ಲಾ ಗೊತ್ತು, 5 ಲಕ್ಷ ಹಣ ಕೊಟ್ರೆ ನಾನು ಯಾವುದೇ ಕೇಸು ಹಾಕಿಸುವುದಿಲ್ಲ ಎಂದು ಹೇಳಿದ, ಅವನ ಜೊತೆಯಲ್ಲಿದ್ದ ಮುನಿರಾಜ್ ಎಂಬುವವನು ನನ್ನನ್ನು ತಡೆದು ಅಡ್ಡ ಹಾಕಿ ನಿಲ್ಲಿಸಿದ, ಆಗ ಕಿರಣ್ ಎಂಬುವನು ಕೈಯಿಂದ ನನ್ನ ತಲೆಯ ಮೇಲೆ ಹೊಡೆದು ಹಲ್ಲೆ ಮಾಡಿದ, ಇವರ ಜೊತೆಯಲ್ಲಿದ್ದ ಇನ್ನಿಬ್ಬರು ಇವರನ್ನು 5 ಲಕ್ಷ ಹಣ ಕೊಡುವವರೆಗೂ ಬಿಡಬೇಡಿ, ಹಣ ಕೊಡಲಿಲ್ಲ ಎಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ಅಷ್ಟರಲ್ಲಿ ಪೊಲೀಸ್ ಅಧಿಕಾರಿಗಳು, ಆಹಾರ ಇಲಾಖೆಯವರು ಹಾಗೂ ರೈಲ್ ಮಿಲ್ ಮಾಲೀಕರ ಸಂಘದ ಪದಾಧಿಕಾರಿಗಳು ಬಂದರು ಎಂದು ಜ್ಙಾನೇಶ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆಹಾರ ಇಲಾಖೆಯವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಮ್ಮುಖದಲ್ಲಿ ಲಾರಿಯಲ್ಲಿ ತುಂಬಿದ್ದ ಅಕ್ಕಿಯನ್ನು ತಪಾಸಣೆ ಮಾಡಿ, ಯಾವುದೆ ಪಡಿತರ ಅಕ್ಕಿ ದಾಸ್ತಾನು ಇರುವುದಿಲ್ಲ ಎಂದು ತಿಳಿಸಿ, ಲಾರಿಯಲ್ಲಿದ್ದ ದಾಖಲಾತಿ ಪರಿಶೀಲಿಸಿ ಕಾನೂನು ಬದ್ಧವಾಗಿದೆ ಎಂದು ಹೇಳಿ ಹೊರಟು ಹೋದರು, ಈ ಹಿಂದೆ 16.08.2022 ರಂದು ಇದೇ ತಂಡದ ಮೇಲೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇದೆ ರೀತಿಯ ಪ್ರಕರಣ ದಾಖಲಾಗಿದೆ.
ರೈಸ್ ಮಿಲ್ಲಿಗೆ ಅಕ್ರಮವಾಗಿ ನುಗ್ಗಿ ನನ್ನನ್ನು 5 ಲಕ್ಷ ನೀಡುವಂತೆ ಬ್ಲಾಕ್ ಮೇಲ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಈ ಐವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜ್ಞಾನೇಶ್ ಪೊಲೀಸರಿಗೆ ಮನವಿ ಮಾಡಿದ್ದಾರೆ.