ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡು ಉತ್ತಮವಾಗಿ ಓದುವ ಮೂಲಕ ತಂದೆ-ತಾಯಿಗಳಿಗೆ, ಶಿಕ್ಷಕರಿಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕೆಂದು ಶ್ರೀಶಂಭು ಸೇವಾ ಟ್ರಸ್ಟ್ ಮತ್ತು ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ಮಂಡ್ಯ ತಾಲೂಕಿನ ತಂಡಸನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗ್ ವಿತರಣೆ ಮಾಡಿ ಮಾತನಾಡಿದ ಅವರು, ಬಡ ರೈತನ ಮಗನಾದ ನನಗೆ ಅನ್ನ ಕೊಟ್ಟು ತಾಲೂಕಿನ ಜನ ಒಬ್ಬ ಉದ್ಯಮಿಯಾಗಿ ಬೆಳೆಸಿದ್ದೀರಿ. ನನ್ನ ದುಡಿಮೆಯ ಒಂದಷ್ಟು ಹಣವನ್ನು ಸಮಾಜ ಸೇವಾ ಕೆಲಸಗಳಿಗೆ ವಿನಿಯೋಗಿಸುತ್ತೇನೆ ಎಂದರು.
ನಾನು ನಿಮ್ಮ ಸೇವಕನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಅನ್ಯ ಕಾರಣದಿಂದ ಶಂಭು ಧರ್ಮ ಯಾತ್ರೆ ನಿಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಮುಂದುವರಿಸಲಾಗುವುದು ಎಂದರು.
ನಾನು ಮನ್ಮುಲ್ ಅಧ್ಯಕ್ಷನಾದ ನಂತರ 14ನೇ ಸ್ಥಾನದಲ್ಲಿದ್ದ ಮಂಡ್ಯ ಹಾಲು ಒಕ್ಕೂಟವನ್ನು ಎಲ್ಲರ ಸಹಕಾರದಿಂದ ಮೂರನೇ ಸ್ಥಾನಕ್ಕೆ ತರುವ ಕೆಲಸ ಮಾಡಿದ್ದೇವೆ. ಹಾಲು ಉತ್ಪಾದನೆಯಲ್ಲಿ ಮಂಡ್ಯ ಒಕ್ಕೂಟ ಹೆಚ್ಚು ಹಾಲು ಶೇಖರಣೆ ಮಾಡುತ್ತಿದೆ ಎಂದರು.
ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಕಳೆದ 6 ತಿಂಗಳಿಂದ ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮನಮುಲ್ ಉಪಾಧ್ಯಕ್ಷ ರಘುನಂದನ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರೇಗೌಡ, ಮುಖ್ಯ ಶಿಕ್ಷಕಿ ಉಮಾ, ಡೇರಿ ಅಧ್ಯಕ್ಷ ಮೋಹನ್, ಮಂಜು, ನವೀನ್ ಕುಮಾರ್ ಸೇರಿದಂತೆ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.