- ✍️ ಚಿದಂಬರ ನರೇಂದ್ರ
ಗೌರಿ
ಮೊನ್ನೆ ಮೊನ್ನೆಯಷ್ಟೇ
ನಮ್ಮ ಜೊತೆಯಿದ್ದ ಸಣಕಲು
ಗಟ್ಟಿಗಿತ್ತಿಯೊಬ್ಬಳನ್ನು
ಆಕೆ
ಬಡವರ, ಆದಿವಾಸಿಗಳ
ಅಲ್ಪಸಂಖ್ಯಾತರ, ಹಿಂದುಳಿದವರ
ದಲಿತರ ಪರವಾಗಿ ಮಾತನಾಡುತ್ತಾಳೆ
ಎನ್ನುವ ಕಾರಣಕ್ಕಾಗಿ ಕೊಲ್ಲಲಾಯಿತು
ಗುಂಡು ಹೊಡೆದು.
ಆಕೆಯ ಕೊಲೆಗಾರ ಅರೆಸ್ಟ್ ಆದಾಗ
ಅವನ ಮೋಬೈಲ್ ನಲ್ಲಿ ಸಿಕ್ಕವು
ಆಕೆಯ ಮೂರು ಸೆಲ್ಫಿಗಳು.
ಒಂದರಲ್ಲಿ ಆಕೆ,
ಬಡವರೊಂದಿಗೆ ಧರಣಿ ಕೂತಿದ್ದಳು
ಮನುಷ್ಯರ ಆಹಾರದ ಹಕ್ಕಿಗಾಗಿ,
ಇನ್ನೊಂದರಲ್ಲಿ ,ಸ್ವಚ್ಛ ಮಾಡುತ್ತಿದ್ದಳು
ಬುಡನ್ ಸೂಫಿಯ ಹಾದಿಯಲ್ಲಿ ಹಾಕಲಾಗಿದ್ದ
ಕಲ್ಲು ಮುಳ್ಳುಗಳನ್ನು ಕಿತ್ತು,
ಮೂರನೇಯದರಲ್ಲಿ
ಟಾರ್ಚ್ ಹಿಡಿದುಕೊಂಡು ನಿಂತಿದ್ದಳು
ಮುಚ್ಚಿದ ದೇವರ ಮನೆಯ ಬಾಗಿಲಲ್ಲಿ,
ಹಟಮಾರಿ ಹೆಂಗಸು
ಸುಮ್ಮನಿರಬೇಕಿತ್ತು ಮಮ್ಮಲ ಮರುಗಿದರು
ಕೆಲವು ಸಂತ ಗಂಡಸರು,
ಆದರೆ ಹೆಣ್ಣು ಮನಸ್ಸಿಗೆ
ಇದೆಲ್ಲ ಎಷ್ಟು ಅಸಹನೀಯ ಎನ್ನುವುದಕ್ಕೆ
ಸತ್ಯ ಪ್ರಮಾಣದಂತಿವೆ
ಅವಳ ಉದ್ವಿಗ್ನ ಸಿಗರೇಟಿನ ಅಶಾಂತ ಬೂದಿಯಲ್ಲಿ
ಇನ್ನೂ ಉರಿಯುತ್ತಿರುವ, ಆರುತ್ತಿರುವ
ಸ್ಪಷ್ಟ, ಅಸ್ಪಷ್ಟ ದನಿಗಳು.