ರಾಜರಾಜೇಶ್ವರಿ ಕಂಬೈನ್ಸ್ ನಿರ್ಮಿಸಿರುವ ‘ದೊಡ್ಡಹಟ್ಟಿ ಬೋರೇಗೌಡ’ ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. ಸರ್ಕಾರ ಬಡವರಿಗೆ ಕೊಡುವ ಆಶ್ರಯ ಯೋಜನೆಯಡಿ ಕೊಡುವ ಮನೆಯನ್ನು ಪಡೆಯಲು ಮುಗ್ಧ ಗ್ರಾಮೀಣ ರೈತನು ಎದುರಿಸುವ ಸಮಸ್ಯೆಗಳು, ನೋವು-ನಲಿವುಗಳನ್ನು ಜನರ ಮುಂದೆ ನೈಜ್ಯವಾಗಿ ಈ ಚಿತ್ರ ತೆರೆದಿಡಲಿದೆ.
ಈ ಚಿತ್ರವು ಬೆಂಗಳೂರಿನ 13ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಆದರೆ ನಂತರ ದಿನಗಳಲ್ಲಿ ಚಿತ್ರವನ್ನು ತೆರೆಗೆ ತರಲು ಆರ್ಥಿಕ ಸಂಕಷ್ಟ ಎದುರಾಯಿತು. ಈಗ ಈ ಚಿತ್ರವನ್ನು ಬಿಡುಗಡೆ ಮಾಡಲು ಹಂಚಿಕೆದಾರರಾದ ಜಿ.ಅನ್ನಪೂರ್ಣವೆಂಕಟೇಶ್ ಅವರು ಮುಂದೆ ಬಂದಿದ್ದಾರೆಂದು ಚಿತ್ರದ ನಿರ್ದೇಶಕ ಕೆ. ಎಂ. ರಘು ಮಂಡ್ಯದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದಲ್ಲಿ ಮೂರು ಹಾಡುಗಳಿವೆ, ‘ಸೂರೊಂದು ಬೇಕೆಂದು ನೂರು ತವಕ, ಕನಸ್ಸೆಲ್ಲಾ ನನಸಾಗದೆ’.. ಗೀತೆ ಪ್ರೇಕ್ಷಕರ ಮನ ಗೆಲುತ್ತದೆ. ನೀಲಿ ಸಿದ್ದಾಪ್ಪಾಜಿ ಹಿನ್ನೆಲೆ ಗೀತೆ ಬಹಳ ಇಂಪಾಗಿ ಪ್ರೇಕ್ಷರಿಗೆ ಮುದನೀಡುತ್ತದೆ.
ಚಿತ್ರದ ಪ್ರಮುಖ ಪಾತ್ರಧಾರಿಯಾದ ಬೋರೆಗೌಡನ ಪಾತ್ರದಲ್ಲಿ ಮೈಸೂರಿನ ಶಿವಣ್ಣ ಬೀರಿಹುಂಡಿ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಕಲಾರತಿ ಮಹದೇವ, ಲಾವಣ್ಯ ನಟನ, ಮೈಸೂರಿನ ಪ್ರೇಮ, ಕಾತ್ಯಾಯಿನಿ ಯಶೋಮಿತ್ರ ನಾಯಕಿಯ ಮಗಳ ಪಾತ್ರದಲ್ಲಿ, ಮೈಸೂರಿನ ಪಡುವರಳ್ಳಿಯ ಅಭಿಜುವೆಲ್, ಗೀತಾ ಅಭಿನಯಿಸಿದ್ದಾರೆ. ನಾಗರಾಜ್ ಮೂರ್ತಿ ಸಿನಿಮಾಟೋಗ್ರಾಫರ್ ಆಗಿದ್ದು, ಶಶಿಕುಮಾರ್ ಮತ್ತು ಕೆ.ಎಂ.ಲೋಕೇಶ್ ನಿರ್ಮಾಪಕರಾಗಿದ್ದಾರೆ ಎಂದರು.
ಇದು ಪಕ್ಕ ಕಮರ್ಶಿಷಿಯಲ್ ಸಿನಿಮಾ. ಮನರಂಜನೆ ಕೊಡುವುದರ ಜೊತೆಗೆ ಪ್ರೇಕ್ಷಕರ ಮನಸ್ಸಿನಲ್ಲಿ ಎಲ್ಲಾ ಪಾತ್ರಗಳು ಉಳಿಯುತ್ತದೆ ಮತ್ತು ಪಾತ್ರಗಳು ನೈಜವಾಗಿ ಬಂದಿದೆ. ನಿರೂಪಣೆ, ಡೈಲಾಗ್, ಪಾತ್ರಧಾರಿಗಳ ನಟನೆ, ಹಾಡು, ಎಲ್ಲ ಚೆನ್ನಾಗಿ ಮೂಡಿ ಬಂದಿವೆ. ಉತ್ತಮ ಚಿತ್ರವೆಂದು ಅವಾರ್ಡ್ ಕೂಡ ದೊರಕಿರುವುದು ನಮ್ಮ ತಂಡಕ್ಕೆ ಇನ್ನಷ್ಟು ಉತ್ತೇಜನವನ್ನು ನೀಡಿದೆ.
ಚಿತ್ರೋತ್ಸವ ನಡೆದ ಬೆಂಗಳೂರಿನ ಓರಿಯನ್ ಮಹಲ್ ಮತ್ತು ಸುಚಿತ್ರ ಫಿಲಂ ನಲ್ಲೂ ಚಿತ್ರ ಹೌಸ್ಫುಲ್ ಪ್ರದರ್ಶನ ಕಂಡಿದೆ. ಮೈಸೂರು ದಸರದಲ್ಲೂ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಹರ್ಷವರ್ಧನ ರಾಜ್ ಸಂಗೀತಾ ನೀಡಿದ್ದು, ಡಾ.ನಾಗೇಂದ್ರ ಪ್ರಸಾದ್, ಸಂದೀಪ್ ಸಾಹಿತ್ಯವಿದ್ದು, ಮೆಹಬೂಬ್ ಸಾಬ್, ಅನಿರುದ್ದ, ಅನನ್ಯ ಭಟ್ ಈ ಮೂವರು ಗಾಯಕರು ಹಾಡುಗಳನ್ನು ಹಾಡಿದ್ದಾರೆ.
ಈ ಸಿನಿಮಾದಲ್ಲಿ ಒಳ್ಳೆಯ ತಿರುಳು ಮತ್ತು ನಾಡಿನ ಜನಪದ ಮತ್ತು ಮಾತುಕತೆ ಮತ್ತು ನಾಡಿನ ಜನತೆಯ ನೆಟಿವಿಟಿಯನ್ನು ಬೆಸೆದುಕೊಂಡಿದೆ ಎಂದು ಸಿನಿಮಾ ಇಷ್ಟಪಟ್ಟು ಜಿ.ಅನ್ನಪೂರ್ಣ ವೆಂಕಟೇಶ್ ಅವರು ಹಂಚಿಕೆ ಮಾಡುತ್ತಿದ್ದಾರೆ. ಸಿನಿಮಾ ಇದೇ ಫ್ರೆಬವರಿ 17ರಂದು ಬಿಡುಗಡೆಗೊಳ್ಳಲಿದೆ. ಆದ್ದರಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರವನ್ನು ವೀಕ್ಷಣೆ ಮಾಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತೆ ನಿರ್ದೇಶಕ ಕೆ.ಎಂ.ರಘು ಮನವಿ ಮಾಡಿದರು.