ದೇವಾಲಯಗಳು ನಮ್ಮ ಸಂಸ್ಕೃತಿ-ಪರಂಪರೆಯ ಪ್ರತಿಬಿಂಬವಾಗಿವೆ. ಮುಂದಿನ ಪೀಳಿಗೆಗೆ ಇವುಗಳನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮಲ್ಲರದ್ದಾಗಿದೆ. ಹಾಗಾಗಿ ಎಲ್ಲರೂ ದೇವಾಲಯ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಹೇಳಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಚಿಲ್ಲದಹಳ್ಳಿ ಗ್ರಾಮಸ್ಥರು ಪುನರ್ ನಿರ್ಮಾಣ ಮಾಡುತ್ತಿರುವ ಗ್ರಾಮದೇವತೆ ಮಾಯಮ್ಮ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಸಹಾಯಧನದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಇತ್ತೀಚೆಗೆ ಚಿಲ್ಲದಹಳ್ಳಿ ಗ್ರಾಮಸ್ಥರು ದೇವಾಲಯದ ಸಮಿತಿ ಅಧ್ಯಕ್ಷರಾದ ಪಟೇಲ್ ನಾಗೇಗೌಡರ ನೇತೃತ್ವದಲ್ಲಿ ವಿಜಯ್ ರಾಮೇಗೌಡ ಅವರನ್ನು ಭೇಟಿ ಮಾಡಿ ನೆರವು ನೀಡುವಂತೆ ಮನವಿ ಮಾಡಿದ್ದರು, ಈ ಹಿನ್ನೆಲೆಯಲ್ಲಿ ನೆರವಿನ ಚೆಕ್ ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ, ವಿಜಯ್ ರಾಮೇಗೌಡರು ಕಳೆದ ಒಂದು ವರ್ಷದಿಂದ ತಾಲ್ಲೂಕಿನಾದ್ಯಂತ ಬಡವರಿಗೆ ಧಾರ್ಮಿಕ ಕಾರ್ಯಗಳಿಗೆ ನೆರವು ನೀಡುತ್ತಿದ್ದಾರೆ ಎಂದರು.
ಮಾಯಮ್ಮ ದೇವಾಲಯ ಜೀಣೋದ್ದಾರ ಸೇವಾ ಟ್ರಸ್ಟಿನ ಅಧ್ಯಕ್ಷ ಪಟೇಲ್ ನಾಗೇಗೌಡ ಅವರು ವಿಜಯ್ ರಾಮೇಗೌಡ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಧವ ಪ್ರಸಾದ್, ಎ.ಬಿ.ಕುಮಾರ್, ಆಲಂಬಾಡಿ ಕಾವಲು ಸಿದ್ದಿಕ್ ಅಹಮದ್, ಪಟೇಲ್ ನಾಗೇಗೌಡ, ವೆಂಕಟೇಶ್, ಜಯರಾಮೇಗೌಡ, ಮಹೇಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.