ರೈತರು ಬೆಳೆದ ರಾಗಿ ಬೆಳೆಗೆ ಬೆಂಬಲ ಬೆಲೆಯಡಿ ಆರಂಭಿಸಿರುವ ಖರೀದಿ ಕೇಂದ್ರದಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂದು ರೈತರು ಆರೋಪಿಸಿದ್ದಾರೆ.
ಪಾಂಡವಪುರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಬದಲಿಗೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಕಲ್ಲು, ಮರಳು, ಅಕ್ಕಿ,ಗೋಧಿ ಮಿಶ್ರಿತ ರಾಗಿಯನ್ನು ರಾತ್ರೋ ರಾತ್ರಿ ಕರ್ನಾಟಕ ಸರ್ಕಾರ ಹೆಸರಿರುವ ಚೀಲಗಳಿಗೆ ಯಾವ ಅಧಿಕಾರಿಗಳಿಲ್ಲದೆ ದಲ್ಲಾಳಿಗಳ ನೇತೃತ್ವದಲ್ಲಿ ತುಂಬಲಾಗುತ್ತಿದೆ ಎಂದು ರೈತರಾದ ಹಾರೋಹಳ್ಳಿ ಪ್ರದೀಪ್ ಹಾಗೂ ಡೈಮಂಡ್ ರವಿ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಆರೋಪ ಮಾಡಿದ್ದಾರೆ.
ಖರೀದಿ ಕೇಂದ್ರದ ಮಾರಾಟ ಅಧಿಕಾರಿ ಲಿಂಗರಾಜು ಹಾಗೂ ಸಹಾಯಕ ಕಾರ್ತಿಕ್ ಸೇರಿದಂತೆ ಇತರೆ ಅಧಿಕಾರಿ ವರ್ಗ ದಲ್ಲಾಳಿಗಳ ಜತೆ ಶಾಮೀಲಾಗಿ ರೈತರನ್ನು ವಂಚಿಸುತ್ತಿದ್ದಾರೆಂದು ದೂರಿರುವ ಅವರು, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.