ಸವಿತಾ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ತಾಲೂಕು ಸವಿತಾ ಸಮಾಜ ಮಂಗಳವಾದ್ಯ ಕಲಾವಿದರ ಸಂಘ, ತಾಲೂಕು ಹಡಪದ ಅಪ್ಪಣ್ಣ ಸವಿತಾ ಸಮಾಜ ಸಂಘ, ಪಟ್ಟಣ ಸವಿತಾ ಸಮಾಜ ಸಂಘಗಳ ಸಂಯುಕ್ತಾಶ್ರಯದಲ್ಲಿ ಮೂರನೇ ವರ್ಷದ ತ್ಯಾಗರಾಜ ಮತ್ತು ಪುರಂದರದಾಸ ಮತ್ತು ಭಕ್ತ ಕನಕದಾಸರ ಆರಾಧನಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಸವಿತಾ ಸಮಾಜದ ಬಂಧುಗಳ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಲು ಸೂಕ್ತವಾದ ನಿವೇಶನವನ್ನು ದೊರಕಿಸಿ ಕೊಡುವ ಜೊತೆಗೆ ಭವನದ ನಿರ್ಮಾಣಕ್ಕೆ ವಿಶೇಷ ಅನುದಾನವನ್ನು ದೊರಕಿಸಿಕೊಡುವುದಾಗಿ ತಿಳಿಸಿ ತುಳಿತಕ್ಕೊಳಗಾದ ಎಲ್ಲಾ ಸಮಾಜಗಳಿಗೆ ಆರ್ಥಿಕವಾಗಿ, ರಾಜಕೀಯವಾಗಿ ಶಕ್ತಿ ತುಂಬಲು ಬದ್ಧರಾಗಿರುವುದಾಗಿ ಹೇಳಿದರು.
ಕರ್ನಾಟಕ ರಾಜ್ಯದ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಸಂಗೀತ ಕಲಾನಿಧಿ ತ್ಯಾಗರಾಜರು ಮತ್ತು ಪುರಂದರದಾಸರು ಹಾಗೂ ದಾಸಶ್ರೇಷ್ಠರಾದ ಭಕ್ತಕನಕದಾಸರ ಕೊಡುಗೆ ಅಪಾರವಾಗಿದೆ ಎಂದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಬೆಳ್ಳಿರಥದ ಮೂಲಕ ಸದ್ಗುರುಗಳ ಭಾವಚಿತ್ರವನ್ನು ವೀರಗಾಸೆ ನೃತ್ಯ, ಮಂಗಳವಾದ್ಯ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಿ ನಂಜಮ್ಮ ಮುದ್ದೇಗೌಡ ಸಮುದಾಯ ಭವನದವರೆಗೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಸಾಧನೆಗೈದ ಸವಿತಾ ಸಮಾಜದ ಸಾಧಕರನ್ನು ಸಚಿವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮುಖಂಡರಾದ ಬಿ.ಜವರಾಯಿಗೌಡ, ಬಿಲ್ಲೇನಹಳ್ಳಿಕುಮಾರ್, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಭಾರತೀಪುರ ಪುಟ್ಟಣ್ಣ, ಸಚಿವರ ಆಪ್ತಸಹಾಯಕ ದಯಾನಂದ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ಹಾಸನ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ತಮ್ಮಯ್ಯ, ಪುರಸಭಾ ಸದಸ್ಯ ಕೆ.ಆರ್. ನೀಲಕಂಠ, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸಂತೇಬಾಚಹಳ್ಳಿ ಮಂಜುನಾಥ್, ತಾಲೂಕು ಮಂಗಳವಾದ್ಯ ಕಲಾ ಸಂಘದ ಅಧ್ಯಕ್ಷ ಮೋದೂರು ಶೇಖರ್ ಮತ್ತಿತರರು ಭಾಗವಹಿಸಿದ್ದರು.