ವರದಿ : ಪ್ರಭು ವಿ.ಎಸ್.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅರ್ಹ ಫಲಾನುಭವಿಗಳು ಇದರ ಸದುಪಯೋಗಕ್ಕೆ ಮುಂದಾಗಬೇಕೆಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.
ಮದ್ದೂರು ಪಟ್ಟಣದ ಶಾಸಕರ ನಿವಾಸದ ಬಳಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಭವ ಅಭಿವೃದ್ಧಿ ನಿಗಮದ ವತಿಯಿಂದ ಅರ್ಹ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ಭೋವಿ ಜನಾಂಗ ಮತ್ತು ಎಸ್ಸಿ ಸಮುದಾಯದವರಿಗೆ ಹತ್ತು ಹಲವು ಸೌಲಭ್ಯಗಳನ್ನುಕಲ್ಪಿಸಿ ಸಮಾಜದ ಮುಖ್ಯವಾಹಿನಿ ಜತೆಗೆ ಆರ್ಥಿಕವಾಗಿ ಸಬಲರನ್ನಾಗಿಸುವ ದೃಷ್ಠಿಯಿಂದ ಸರ್ಕಾರ ಹಾಗೂ ನಿಗಮ ಹಲವು ಯೋಜನೆಯನ್ನು ಜಾರಿಗೊಳಿಸಿದ್ದು ಮದ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗಕ್ಕೆ ಮುಂದಾಗಬೇಕೆಂದರು.
ನೇರ ಸಾಲ, ಗಂಗಕಲ್ಯಾಣ ಯೋಜನೆ, ಕೊಳವೆ ಬಾವಿ ನಿರ್ಮಾಣ, ಇನ್ನಿತರ ಯೋಜನೆಗಳಿಂದ ಸಾಲ ಸೌಲಭ್ಯ ವಿತರಿಸುವ ಜತೆಗೆ ಅರ್ಹ ಫಲಾನುಭವಿಗಳು ಕೊಳವೆ ಬಾವಿ ನಿರ್ಮಿಸಲು ಅನುಕೂಲ ಕಲ್ಪಿಸಿದ್ದು ಮತ್ತು ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿ ಉತ್ತಮ ಜೀವನ ನಿರ್ವಹಣೆ ಮಾಡಲು ಅನುಕೂಲ ಕಲ್ಪಿಸಿದೆ ಎಂದರು.
ತಾಲೂಕಿನಾದ್ಯಂತ ಅಂಬೇಡ್ಕರ್ ನಿಗಮದಿಂದ 45 ಮಂದಿಯನ್ನು ಆಯ್ಕೆಗೊಳಿಸಿದ್ದು ಈ ಪೈಕಿ 17 ಮಂದಿ ಆದಿ ಜಾಂಭವ ನಿಗದಿಂದ ೨೦ ಮಂದಿ ಆಯ್ಕೆಯಾಗಿದ್ದು ಈಪೈಕಿ ೧೦ ಮಂದಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದ್ದು ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರ ದಾಖಲಾತಿಗಳನ್ನು ಪರಿಶೀಲಿಸಿ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಪ್ರತಿಯೊಬ್ಬ ಫಲಾನುಭವಿಯು ಸಮರ್ಪಕ ಬಳಕೆಗೆ ಮುಂದಾಗುವ ಜತೆಗೆ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ ಸರ್ಕಾರದ ಸೌಲಭ್ಯವನ್ನು ಬಳಕೆ ಮಾಡಿಕೊಂಡು ಆರ್ಥಿಕಾಭಿವೃದ್ಧಿ ಹೊಂದಬೇಕೆಂದು ಕಿವಿಮಾತು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಸುರೇಶ್ಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕುಮಾರಸ್ವಾಮಿ, ತಾಲೂಕು ಅಭಿವೃದ್ಧಿ ಯೋಜನಾಧಿಕಾರಿ ಡಿ.ಕೆ. ಸಿದ್ದಯ್ಯ ಇತರರಿದ್ದರು.