ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶ್ರಮಿಕ ನಗರ (ಸ್ಲಂ) ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಹಂತ ಹಂತವಾಗಿ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ಮಂಡ್ಯ ನಗರದ ಕಾಳಪ್ಪ ಬಡಾವಣೆಯಲ್ಲಿ ವಸತಿ ಇಲಾಖೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಆಯೋಜಿಸಿದ್ದ ಕೊಳಗೆರಿ ನಿವಾಸಿಗಳಿಗೆ ಪರಿಚಯ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಹು ವರ್ಷಗಳಿಂದ ಕಾಳಪ್ಪ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳ ನಿವೇಶನ ಜಾಗವು ವ್ಯಾಜ್ಯಗಳಿಂದ ಸಾಗುತ್ತಿದ್ದವು, ಹಂತ ಹಂತವಾಗಿ ವ್ಯಾಜ್ಯಗಳು ಮುಗಿಯುತ್ತಿವೆ, ಕೊಳಗೇರಿ ಮಂಡಳಿಯಿಂದ ಎಲ್ಲಾ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ, ಪರಿಚಯ ಪತ್ರಗಳನ್ನು ನೀಡಲಾಗುತ್ತಿದೆ, ವಾಸ ಮಾಡುತ್ತಿರುವವರಿಗೇ ಮಾತ್ರ ಪತ್ರಗಳನ್ನು ನೀಡಲಾಗುತ್ತಿದೆ ಎಂದು ನುಡಿದರು.
ಚುನಾವಣೆಯ ದಿನಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ ಎಂಬು ಭಾವಿಸುವುದು ಸಾಮಾನ್ಯವಾಗಿದ್ದರೂ, ಜಾಗದ ವ್ಯಾಜ್ಯ, ಸರ್ಕಾರದಿಂದ ಆದೇಶ ಬರುವುದು ವಿಳಂಬವಾಗಿದೆ, ಖುದ್ದು ಅಧಿಕಾರಿಗಳ ಬೆನ್ನು ಹತ್ತಿ, ರಾಜ್ಯ ಮಟ್ಟದ ಅಧಿಕಾರಿಗಳ ಸಂಪರ್ಕಿಸಿ, ಇಂತಹ ಕಾರ್ಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಮಂಜು, ಶಾಸಕರ ಬಹುವರ್ಷಗಳ ಹೋರಾಟದ ಫಲವಾಗಿ ಇಂದು ಕಾಳಪ್ಪ ಬಡಾವಣೆಯ ಜಾಗ ನಿಮ್ಮ ಕೈಸೇರಿದೆ, ಹೋರಾಟಗಾರರ ಶ್ರಮಕ್ಕೆ ಫಲ ಲಭಿಸಿದೆ, ಕೊಳಗೇರಿ ಮಂಡಳಿ ಅಧಿಕಾರಿಗಳ ಕಾರ್ಯ ಸಫಲತೆ ನೀಡುತ್ತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಗೀತಾ, ಹೋರಾಟಗಾರರಾದ ಎನ್.ನಾಗೇಶ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಕಮಲ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.