ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳು ಹಾಗೂ ಶಾಸಕ ಸುರೇಶ್ಗೌಡರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆಂದು ಆರೋಪಿಸಿ ನಾಗಮಂಗಲ ತಾಲೂಕು ಉಮೇಶ್ ಹಡೇನಹಳ್ಳಿ ಎಂಬುವರ ವಿರುದ್ಧ ಜೆಡಿಎಸ್ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಡಿ.ಎಂ. ಮಹೇಶ್ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಉಮೇಶ್ ಅವರು ಫೇಸ್ಬುಕ್ ಖಾತೆಯಲ್ಲಿ ಜಾತಿ ಜಾತಿಗಳ ನಡುವೆ ಕೋಮು ಗಲಭೆಯನ್ನು ಎಬ್ಬಿಸುವ ರೀತಿಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡುತ್ತಾ, ನಾಗಮಂಗಲ ಶಾಸಕ ಸುರೇಶ್ಗೌಡ ಅವರಿಗೆ ತೇಜೋವಧೆ ಮಾಡಿರುವ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾರೆ.
ಉಮೇಶ್ ಅವರ ಫೇಸ್ಬುಕ್ ಖಾತೆಯನ್ನು ರದ್ದುಪಡಿಸಿ ಚುನಾವಣಾ ಮಾದರಿ ಸಂಹಿತೆ ಇದ್ದರೂ ಜಾತಿ, ಜಾತಿಗಳ ನಡುವೆ ಕೋಮು ಗಲಭೆ ಎಬ್ಬಿಸುವ ರೀತಿಯಲ್ಲಿ ಪೋಸ್ಟ್ ಹಾಕುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಕಾನೂನು ಘಟಕದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಬಸವರಾಜು, ಸಾಮಾಜಿಕ ಜಾಲತಾಣದ ಮುಖ್ಯಸ್ಥ ನಿತ್ಯಾನಂದ ಧರ್ಮವೀರ್, ಮಂಡ್ಯ ವಕೀಲರ ಸಂಘದ ಕಾರ್ಯದರ್ಶಿ ಆರ್. ಸಿದ್ದರಾಜು ಹಾಜರಿದ್ದರು.