ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಹುನ್ನಾರವನ್ನು ವಿಫಲಗೊಳಿಸಿ ಗುಜರಾತ್ ನ ಅಮೂಲ್ ನಿಂದ ಕರ್ನಾಟಕದ ‘ನಂದಿನಿ’ಯನ್ನು ರಕ್ಷಣೆ ಮಾಡಲಾಗುವುದೆಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ನಾಗಮಂಗಲ ತಾಲೂಕು ಕಾಂಗ್ರೆಸ್ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೂಲ್-ನಂದಿನಿ ವಿಲೀನವನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಖಚಿತ ನಂಬಿಕೆ ನಮಗಿದೆ ಹೈನುಗಾರಿಕೆಗೇ ಹೆಚ್ಚಿನ ಹೊತ್ತನ್ನ ಕೊಟ್ಟು ಒಕ್ಕೂಟದ ಸಮಸ್ಯೆ ಬಗೆಹರಿಸಿ ರೈತರಿಗೆ ಹೆಚ್ಚು ಒತ್ತು ಕೊಡುತ್ತೇವೆ ಎಂಬ ಭರವಸೆ ನೀಡಿದರು.
ಭಾರತ ಮಾತ್ರವಲ್ಲದೆ ವಿದೇಶಗಳ ಮಾರುಕಟ್ಟೆಯಲ್ಲೂ ಕೂಡ ನಂದಿನಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಆದರೆ ಅಮಿತ್ ಶಾ ಮಂಡ್ಯ ಜಿಲ್ಲೆಗೆ ಆಗಮಿಸಿದ ನಂತರ ಅಮೂಲ್ ವಿಸ್ತರಣೆಗಾಗಿ ನಂದಿನಿಯನ್ನು ಬಲಿ ತೆಗೆದುಕೊಳ್ಳಲು ಕುತಂತ್ರ ನಡೆಸಿರುವುದು ಬಯಲಿಗೆ ಬಂದಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ರಾಜ್ಯದ ಸುಮಾರು 26 ಲಕ್ಷ ಕುಟುಂಬಗಳು ನಂದಿನಿಯಿಂದ ಜೀವನ ಕಟ್ಟಿಕೊಂಡಿವೆ, ಇದನ್ನು ಹಾಳುಗೆಡವಲು ಬಿಜೆಪಿ ನಾಯಕರು ಕುತಂತ್ರ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
17 ಕ್ಕೆ ನಾಮಪತ್ರ ಸಲ್ಲಿಕೆ
ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇದೇ ಏ.17ರಂದು ಮಧ್ಯಾಹ್ನ 12.30ಕ್ಕೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.