ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕದ ಅಭ್ಯರ್ಥಿಯಾಗಿ ಏ.20ರಂದು ಪಾಂಡವಪುರದಲ್ಲಿ ನಾಮಪತ್ರ ಸಲ್ಲಿಸಲಿದ್ದೆನೆಂದು ಯುವ ನಾಯಕ ದರ್ಶನ್ಪುಟ್ಟಣ್ಣಯ್ಯ ಹೇಳಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ರೈತಸಂಘ ಆಯೋಜಿಸಿದ್ದ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2023ರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನತೆ ಕಾಂಗ್ರೆಸ್ ಬೆಂಬಲಿತ ರೈತಸಂಘದ ಅಭ್ಯರ್ಥಿಯಾಗಿರುವ ನನಗೆ ಆಶೀರ್ವಾದ ಮಾಡಬೇಕೆಂದು ಕೋರುತ್ತೇನೆ, ರೈತಸಂಘದ ಮುಖಂಡರು – ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಬೇಕಿದೆ ಎಂದು ಮನವಿ ಮಾಡಿದರು.
ಕ್ಷೇತ್ರದ ಜನತೆ ಹೊಸ ಬದಲಾವಣೆಯನ್ನು ಬಯಸಿದ್ದಾರೆ, ಜನತೆಯ ತೀರ್ಪನ್ನು ಜನಾರ್ಧನನ ತೀರ್ಪು ಎಂದು ಭಾವಿಸಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ, ನಮ್ಮ ತಂದೆ, ರೈತ ಸೇವಕ, ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಹಾದಿಯಲ್ಲಿಯೇ ಸಾಗುತ್ತೇನೆ, ಕಾಂಗ್ರೆಸ್ ಮುಖಂಡರ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತೇನೆ ಎಂದು ತಿಳಿಸಿದರು.
ಕೇವಲ 27 ದಿನಗಳಷ್ಟೆ ಚುನಾವಣೆಗೆ ಬಾಕಿ ಇವೆ. ದೊಡ್ಡ ದೊಡ್ದ ಪ್ರಚಾರ ಸಭೆಯನ್ನು ಮಾಡಲ್ಲ, ಬಹಿರಂಗ ಸಭೆಯು ನಡೆಯತ್ತವೆ, ದುದ್ದ ಹೋಬಳಿ ಭಾಗ ಜನತೆ ನಮ್ಮನ್ನು ಕೈ ಹಿಡಿದು ಆರ್ಶೀವಾದ ಮಾಡುತ್ತಾರೆ, ಗೆಲುವಿಗೆ ದೊಡ್ಡ ಶಕ್ತಿಯಾಗಿ ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ವಿವಿಧ ಪಕ್ಷದ ಮುಖಂಡರು ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ನಾಯಕತ್ವದ ಬೆಂಬಲಿಸಿ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ಸಿ.ಕೆ ನಾಗರಾಜು, ಜಿ.ಪಂ.ಮಾಜಿ ಸದಸ್ಯ ಮಂಜುನಾಥ್, ರೈತಸಂಘದ ಚಂದ್ರಶೇಖರ್, ಸಂಪಹಳ್ಳಿ ಉಮೇಶ್, ಪಿ.ಕೆ.ಶಂಕರ್, ಹೊಸಹಳ್ಳಿ ಚಂದ್ರು, ಮೊಹನ್, ಕೀಳಘಟ್ಟ ನಂಜುಂಡೇಗೌಡ, ಮರಿಚನ್ನೇಗೌಡ, ಗುನ್ನಾಯಕನಹಳ್ಳಿ ಮುದ್ದೇಗೌಡ ಮತ್ತಿತರರಿದ್ದರು.