ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ಸೇರಿದ ತಕ್ಷಣವೇ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿ.ಫಾರಂ ನೀಡಿದರು. ಇದರೊಂದಿಗೆ ಈ ಬಾರಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವುದು ಖಚಿತವಾಗಿದೆ.
ತಮ್ಮನ್ನು ಹಿಂಬಾಲಿಸಿ ಬರುವ ಸುಮಾರು ಎಂಟತ್ತು ಮಂದಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಜಗದೀಶ್ ಶೆಟ್ಟರ್ ಬೇಡಿಕೆ ಇಟ್ಟಿದ್ದಾರೆಂದು ತಿಳಿದು ಬಂದಿದೆ. ಸುಮಾರು 4 ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ತನ್ನನ್ನು ಬಿಜೆಪಿ ನಾಯಕರು ಅತ್ಯಂತ ಕೀಳಾಗಿ ನಡೆಸಿಕೊಂಡಿದ್ದಾರೆ. ನಾನು ಕಳೆದ 6 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ, ಆದರೆ 7ನೇ ಬಾರಿಗೆ ಬಿಜೆಪಿ ಟಿಕೆಟ್ ನೀಡದೇ ಅವಮಾನ ಮಾಡಿದೆ. ಆದ್ದರಿಂದ ಸ್ವಾಭಿಮಾನಿಯಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.
ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ವ್ಯವಸ್ಥಿವಾಗಿ ಮೂಲೆ ಗುಂಪು ಮಾಡಲಾಯ್ತು, ನನ್ನನ್ನು ಹಾಗೇಯೆ ತುಳಿಯಲು ಪ್ರಯತ್ನಿಸಿದರು ಎಂದು ಅವರು ಕಿಡಿಕಾರಿದ್ದಾರೆ.