Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಂಸೆಗೆ ಹಿಂಸೆ ಉತ್ತರವಾಗಬೇಕೇ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಕಾನೂನು ಉತ್ತರವಾಗಬೇಕೇ..?

✍️ ವಿವೇಕಾನಂದ ಎಚ್ ಕೆ.

ದೇಶದ ಭವಿಷ್ಯದ ದೂರದೃಷ್ಟಿಯ ಸಮಗ್ರ ಚಿಂತನೆಯಿಂದ ಯೋಚಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು.

ಭಾವನಾತ್ಮಕವಾಗಿ ಒಬ್ಬ ಕ್ರಿಮಿನಲ್ ಹತ್ಯೆಯನ್ನು ಸಂಭ್ರಮಿಸಿದರೆ ಅದು ಇರಾಕ್‌ ಸಿರಿಯಾ ಆಫ್ಘನಿಸ್ತಾನ್ ಮೂಲದ ಐಎಸ್ಐಎಸ್ ತಾಲಿಬಾನ್ ಉಗ್ರರ ಮನೋಭಾವವನ್ನು ಪ್ರತಿಫಲಿಸುತ್ತದೆ.

ಉತ್ತರ ಪ್ರದೇಶದಲ್ಲಿ ಅತೀಕ್ ಅಹಮದ್ ಎಂಬ ನಟೋರಿಯಸ್ ಕ್ರಿಮಿನಲ್ ಮತ್ತು ಅವನ ಕುಟುಂಬದ ಸದಸ್ಯರ ಹತ್ಯೆಯಾಗಿದೆ. ಇದು ಕಾನೂನು ಸುವ್ಯವಸ್ಥೆಯ ಸರಿಯಾದ ಹಾದಿಯೇ ಅಥವಾ ಹದಗೆಟ್ಟ ಪರಿಸ್ಥಿತಿಯೇ ಎಂಬ ಚರ್ಚೆ ಪ್ರಾರಂಭವಾಗಿದೆ.

ದುಷ್ಟರಿಗೆ ಶಿಕ್ಷೆಯಾಗಬೇಕು ಎಂಬ ಬಗ್ಗೆ ಯಾರಿಗೂ ತಕರಾರು ಇರುವುದಿಲ್ಲ. ಆದರೆ ಹೇಗೆ ಎಂಬುದು ಪ್ರಶ್ನೆ. ಪೋಲೀಸರೆ ಕಾನೂನು ಜಾರಿ ಮಾಡಬೇಕೆ ಅಥವಾ ನ್ಯಾಯಾಲಯ ತೀರ್ಮಾನ ಕೈಗೊಳ್ಳಬೇಕೇ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಹುಡುಕಿಕೊಳ್ಳಬೇಕಿದೆ.

ಪೋಲೀಸರು ಭ್ರಷ್ಟರು ಅವರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದಲೇ ಅಪರಾಧಿಗಳು ರಾಜಾರೋಷವಾಗಿ ಕೊಲೆ ಅತ್ಯಾಚಾರಗಳಂತ ಅಪರಾಧಗಳನ್ನು ಮಾಡಿ ಬಚಾವಾಗುತ್ತಾರೆ ಎಂಬ ಒಂದು ಆರೋಪ, ನ್ಯಾಯಾಲಯಗಳು ಸಾಕ್ಷಿಗಳ ಆಧಾರದ ಮೇಲೆ ತೀರ್ಪು ಕೊಡುವುದರಿಂದ ಮತ್ತು ನ್ಯಾಯ ಒದಗಿಸಲು ದೀರ್ಘ ಸಮಯ ಬೇಕಾಗಿರುವುದರಿಂದ ಅಪರಾಧಿಗಳಿಗೆ ಯಾವುದೇ ಭಯವಿಲ್ಲ ಎಂಬ ಇನ್ನೊಂದು ಆರೋಪ………

ಇಂತಹ ಸನ್ನಿವೇಶದಲ್ಲಿ ಎನ್ ಕೌಂಟರ್ ಗಳು ಮತ್ತು ಅಪರಾಧಿಗಳಿಂದಲೇ ಅಪರಾಧಿಗಳ ಹತ್ಯೆಗೆ ಚಾಣಕ್ಷ ತಂತ್ರ ಅನುಸರಿಸುವುದು ಸರಿಯಾದ ಕ್ರಮ ಎಂತಲೂ ಸಮರ್ಥನೆಗಳು ಕೇಳಿ ಬರುತ್ತದೆ.

ಭಾರತದಂತ ಬೃಹತ್ ವೈವಿಧ್ಯಮಯ ದೇಶದಲ್ಲಿ ಮೇಲ್ನೋಟದ ಸರಳ ಭಾವನಾತ್ಮಕ ಕ್ರಮಗಳು ಈ ಕ್ಷಣದಲ್ಲಿ ಸರಿ ಎನಿಸಿದರು ದೀರ್ಘಕಾಲದಲ್ಲಿ ಅದು ಅಪಾಯಕಾರಿಯಾಗಿ ಬೆಳೆಯುತ್ತದೆ. ಇಲ್ಲಿ ಆಡಳಿತ ಪಕ್ಷಗಳು ಬದಲಾಗುವುದರಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಯಾವುದೇ ಹಿಂಸೆಗೆ ಕಾನೂನು ಮತ್ತು ನ್ಯಾಯಾಲಯಗಳು ಉತ್ತರವಾದಾಗ ಸಾರ್ವಜನಿಕ ಮಾನ್ಯತೆ ಪಡೆಯುತ್ತದೆ. ಅದಕ್ಕೆ ವಿರುದ್ಧವಾಗಿ ಜನರೇ ಕಾನೂನು ಕೈಗೆ ತೆಗೆದುಕೊಂಡರೆ ಇಡೀ ವ್ಯವಸ್ಥೆ ರಕ್ತಸಿಕ್ತವಾಗುತ್ತದೆ.

ಹಿಂಸೆಯ ಬಗ್ಗೆ ನಮ್ಮ ದೇಶದ ವಿವಿಧ ‌ಧರ್ಮಗಳ‌ ಧಾರ್ಮಿಕ ನಂಬಿಕೆಗಳು ಹೇಗಿದೆ ಎಂಬ ಬಗ್ಗೆ ಒಂದು ಸರಳ ನಿರೂಪಣೆ…

ಧರ್ಮ ರಕ್ಷಣೆಗಾಗಿ ಅಧರ್ಮ ಅಥವಾ ಹಿಂಸೆ ಸರಿಯೇ ? ಒಪ್ಪಿತವೇ ? ಈಗಲೂ ಪ್ರಸ್ತುತವೇ ?

ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ದ, ಜೈನ ಮತ್ತು ಇನ್ನೂ ಅಧೀಕೃತ ಮಾನ್ಯತೆ ಪಡೆಯದ ಬಸವ ಧರ್ಮದ ಮೂಲ ಆಶಯಗಳ ಹಿನ್ನೆಲೆಯಲ್ಲಿ………..

ಬೌದ್ದ ಮತ್ತು ಜೈನ ಧರ್ಮಗಳು ಅಹಿಂಸೆ ಮತ್ತು ಸರಳತೆಯನ್ನು, ಆಸೆ ಮತ್ತು ನಿಯಂತ್ರಣಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಹಿಂಸೆಯನ್ನು ಯಾವುದೇ ರೂಪದಲ್ಲೂ ಪ್ರೋತ್ಸಾಹಿಸುವುದಿಲ್ಲ. ಧರ್ಮ ರಕ್ಷಣೆಯ ಒತ್ತಡವನ್ನು ಹೇರುವುದಿಲ್ಲ.

ಬಸವ ಧರ್ಮ ಸಮ ಸಮಾಜದ, ಕಾಯಕ ತತ್ವದ ಅಡಿಯಲ್ಲಿ ಸಕಲರಲ್ಲಿ ಒಳ್ಳೆಯದನ್ನೇ ಬಯಸುವ ಆಶಯವನ್ನು ಹೊಂದಿದೆ. ದಯವೇ ಧರ್ಮ ಮೂಲ ಎನ್ನುತ್ತದೆ. ಇನ್ನು ಹಿಂಸೆಯ ಮಾತೆಲ್ಲಿ….

ಬುದ್ದ, ಮಹಾವೀರ ಕೇಂದ್ರಿತ ಜೈನ ತೀರ್ಥಂಕರರು ಮತ್ತು ಬಸವೇಶ್ವರರು, ವ್ಯಕ್ತಿ ಕೇಂದ್ರಿತ ಚಿಂತನೆಗಳ ಆಧಾರದಲ್ಲಿ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಕೆಲವು ಅಂಶಗಳನ್ನು ಹೇಳಿದ್ದಾರೆ. ಅವುಗಳನ್ನು ಧರ್ಮ ಎನ್ನುವುದಕ್ಕಿಂತ ಬದುಕಿನ ಸಾರ್ಥಕತೆಯ ಮಾರ್ಗ ಸೂತ್ರಗಳು ಎನ್ನಬಹುದು.

ಕ್ರಿಶ್ಚಿಯನ್ ಧರ್ಮದಲ್ಲಿ ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ, ಸಮಾಜದ ಅತ್ಯಂತ ದುರ್ಬಲ ವರ್ಗದವರನ್ನು ಪ್ರೀತಿಸಿ – ಅವರಿಗೆ ನೆರವಾಗಿ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆ ಧರ್ಮದ ಅನುಯಾಯಿಗಳು ಅನಂತರದಲ್ಲಿ ಮತಾಂತರಕ್ಕೆ ಪ್ರೋತ್ಸಾಹಿಸಿದರು ಎಂಬುದು ನಿಜ. ಆದರೆ ಅದು ಆಸೆ ಆಮಿಷಗಳ ರೂಪದಲ್ಲಿ ಹೆಚ್ಚಾಗಿ ಕಂಡುಬರುತ್ತದೆಯೇ ಹೊರತು ಈಗಿನ ಕಾಲದಲ್ಲಿ ಹಿಂಸೆಯ ರೂಪ ಅಷ್ಟಾಗಿ ಕಾಣುವುದಿಲ್ಲ.

ಆದರೆ,
ಹಿಂದೂ ಮತ್ತು ಇಸ್ಲಾಂ ಧರ್ಮದಲ್ಲಿ ಧರ್ಮದ ರಕ್ಷಣೆಗಾಗಿ ಹಿಂಸೆಯ ಪ್ರತಿಪಾದನೆ ಬೇರೆ ಬೇರೆ ರೂಪದಲ್ಲಿ ಕಂಡುಬರುತ್ತವೆ.

ಕಾನೂನಿನ ಪರಿಭಾಷೆಯಂತೆ ಧರ್ಮದ ಅರ್ಥವನ್ನು ಸಹ ಅನೇಕ ಕೋನಗಳಲ್ಲಿ ವಿಧವಿಧವಾಗಿ ಅರ್ಥೈಸಬಹುದು.
ಆದರೆ ಇಲ್ಲಿ ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಯ ಆಧಾರದಲ್ಲಿ ಇದನ್ನು ನೋಡುವ ಒಂದು ಪ್ರಯತ್ನ….

ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿ, ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸುವ ಸಂದೇಶದಲ್ಲಿ ಧರ್ಮ ರಕ್ಷಣೆಗಾಗಿ ಅಧರ್ಮಿಗಳನ್ನು ಕೊಲ್ಲಬೇಕಾಗುತ್ತದೆ. ಅದಕ್ಕಾಗಿ ತಂತ್ರ ಪ್ರತಿತಂತ್ರ ಹಿಂಸೆ ಸೇರಿ‌ ಯಾವುದೇ ಮಾರ್ಗವನ್ನು ಅನುಸರಿಸಬಹುದು. ಇಲ್ಲದಿದ್ದರೆ ಅಧರ್ಮ ಅನ್ಯಾಯ ಹೆಚ್ಚಾಗಿ ಇಡೀ ಸಮಾಜದ ಅಸ್ತಿತ್ವವೇ ಕುಸಿದು ಹೋಗುತ್ತದೆ. ಅಧರ್ಮಿಗಳು ಮತ್ತು ಅವರ ಬೆಂಬಲಿಗರು ಸಹ ಶಿಕ್ಷೆಗೆ ಅರ್ಹರು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ.

ಬಹುತೇಕ ಇದೇ ಅರ್ಥಕೊಡುವ ಅಂಶಗಳನ್ನು ಇಸ್ಲಾಂ ಸಹ ಪ್ರತಿಪಾದಿಸುತ್ತದೆ. ಇಲ್ಲಿ ಕೆಲವು ಗೊಂದಲಗಳು ಇವೆ ಅಥವಾ ಹುಟ್ಟುಹಾಕಲಾಗಿದೆ ಅಥವಾ ಅರ್ಥೈಸಲಾಗಿದೆ.

ಕಾಫೀರರನ್ನು ಕೊಲ್ಲಿ ಎಂದು ಹೇಳಲಾಗಿದೆಯಂತೆ. ಅಂದರೆ ಅಧರ್ಮೀಯರನ್ನು ಅಥವಾ ಧರ್ಮಕ್ಕೆ ವಿರೋಧ ಇರುವವರನ್ನು ಅಥವಾ ಅನ್ಯ ಧರ್ಮೀಯರನ್ನು ಕೊಂದು ಇಸ್ಲಾಂ ಧರ್ಮ ರಕ್ಷಿಸಿ ಎಂದು ಅರ್ಥೈಸಲಾಗುತ್ತದೆ.

ಭಗವದ್ಗೀತೆಯ ಅರ್ಥದಂತೆ ಅಧರ್ಮೀಯರನ್ನು ಕೊಂದಾದರೂ ಧರ್ಮ ರಕ್ಷಿಸಿ ಎಂಬುದು ಮೂಲ ಇಸ್ಲಾಂ ಧರ್ಮದ ಆಶಯ.
ಆದರೆ ಆಧುನಿಕ ಕಾಲದ ಕೆಲವು ಭಯೋತ್ಪಾದಕ ಸಂಘಟನೆಗಳು ಮತ್ತು ಇಸ್ಲಾಂ ವಿರೋಧಿ ಗುಂಪಿನವರು ಇಡೀ ಜಗತ್ತೇ ಅಲ್ಲಾ ಎಂಬ ದೇವರ ಸೃಷಿ. ಆದ್ದರಿಂದ ಜಗತ್ತನ್ನೇ ಇಸ್ಲಾಮೀಕರಣ ಮಾಡಿ ಎಂದು ತಪ್ಪು ಮಾಹಿಯ ನೀಡಿ ಇಸ್ಲಾಂ ಎಂದರೆ ಹಿಂಸೆ ಎಂಬುದಾಗಿ ತಪ್ಪು ಕಲ್ಪನೆ ಮೂಡಿಸಿದ್ದಾರೆ ಎಂದೂ ಹೇಳಲಾಗುತ್ತದೆ.

ಒಟ್ಟಿನಲ್ಲಿ ಮೂಲ ಧರ್ಮ ರಚಿಸಿದವರ ಆಶಯ ಮತ್ತು ಉದ್ದೇಶ ಏನೇ ಇರಲಿ, ಇಂದಿನ ಎರಡೂ ಧರ್ಮದ ಅನುಯಾಯಿಗಳನ್ನು ಅವರ ಆಚರಣೆಗಳನ್ನು ಅವರ ಅಭಿಪ್ರಾಯಗಳನ್ನು ಅವರ ನಡವಳಿಕೆಗಳನ್ನು ನೋಡಿದಾಗ ಇಬ್ಬರಲ್ಲೂ ಶ್ರೇಷ್ಠತೆಯ ವ್ಯಸನ ಮತ್ತು ಇನ್ನೊಂದು ಧರ್ಮದ ಬಗ್ಗೆ ಅಸಹನೆ – ತುಂಬಿಕೊಂಡಿರುವುದನ್ನು ಕಾಣಬಹುದು. ಅಲ್ಲದೇ ‌ಹಿಂಸೆಯನ್ನು ಮಾಡಿಯಾದರೂ ನಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ.

ಈ ಎರಡೂ ಧರ್ಮದ ತತ್ವಗಳಲ್ಲಿ ವ್ಯಕ್ತಿಯನ್ನು ಗೌಣವಾಗಿಸಿ ಧರ್ಮವನ್ನು ಎತ್ತಿಹಿಡಿಯಲಾಗಿದೆ. ಆತನ ಸ್ವತಂತ್ರ ಚಿಂತನೆಗಳಿಗೆ ಕಡಿವಾಣ ಹಾಕಲಾಗಿದೆ. ಧರ್ಮದ ನೆರಳಲ್ಲಿ ಬದುಕನ್ನು ನಡೆಸಲು ಸೂಚಿಸಲಾಗಿದೆ. ಈ ಕಾರಣದಿಂದಲೇ ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂಸೆ ಜಾಸ್ತಿಯಾಗಿದೆ.

ಈ ಸಂದರ್ಭದಲ್ಲಿ ನಾವು ಮಾಡಬಹುದಾದದ್ದು ಏನು ???

ಯಾರು ಒಪ್ಪಲಿ ಅಥವಾ ಒಪ್ಪದಿರಲಿ ಈ ಕ್ಷಣದ ಈ ಧರ್ಮಗಳು ನಮ್ಮ ವಿನಾಶಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಈ ಧರ್ಮದ ಆಚರಣೆಗಳು ಮತ್ತು ನಂಬಿಕೆಗಳನ್ನು ಖಾಸಗಿ ಸಂಪ್ರದಾಯವಾಗಿ ಮನೆಯೊಳಗಿನ ವ್ಯವಹಾರದಂತೆ ಭಾವಿಸಬೇಕು. ಸಾರ್ವಜನಿಕವಾಗಿ ನಮ್ಮ ದೇಶದ ಸಂವಿಧಾನವೇ ನಿಜವಾದ ಧರ್ಮ ಎಂದು ಅದಕ್ಕೆ ನಿಷ್ಠರಾಗಿರಬೇಕು.

ಕಾಲಕ್ಕೆ ತಕ್ಕಂತೆ ಕೆಲವು ನಿಯಮಾವಳಿಗಳನ್ನು ಜನರ ಶ್ರೇಯೋಭಿವೃದ್ದಿಗಾಗಿ ತಿದ್ದುಪಡಿ ಮಾಡುತ್ತಾ, ವ್ಯಕ್ತಿಯ ಘನತೆಯನ್ನು, ಸ್ವಾತಂತ್ರ್ಯ ಸಮಾನತೆಯನ್ನು ಕಾಪಾಡುತ್ತಾ ಸಂವಿಧಾನವೇ ಧರ್ಮ ಎಂದು ಭಾವಿಸಿದಲ್ಲಿ ಆಧುನಿಕ ನಾಗರಿಕ ಸಮಾಜದ ಬದುಕು ಧರ್ಮದ ಕಾಲಕ್ಕಿಂತ ಹೆಚ್ಚು ಸಹನೀಯ ಮತ್ತು ನೆಮ್ಮದಿಯತ್ತ ಸಾಗುತ್ತದೆ. ಈ ವಿಷಯದಲ್ಲಿ ನೀವು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಮತ್ತೊಮ್ಮೆ ಯೋಚಿಸಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!