ಮಾಜಿ ಸಚಿವ, ಮೇಲುಕೋಟೆ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಮಂಗಳವಾರ ಪಾಂಡವಪುರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಪಾಂಡವಪುರ ಪಟ್ಟಣದ ಐದು ದೀಪದ ವೃತ್ತದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಪತ್ನಿ ನಾಗಮ್ಮ, ಪುತ್ರ ಸಿ.ಪಿ.ಶಿವರಾಜ್, ಸ್ಥಳೀಯ ಮುಖಂಡರು ಸಾಥ್ ನೀಡಿದರು.
ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಪುಟ್ಟರಾಜು ಅವರ ಜೊತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡರು.
ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದೆವು. ರೋಡ್ ಶೋ ಉದ್ದಕ್ಕೂ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಪುಟ್ಟರಾಜು ಪರ ಜೆಡಿಎಸ್ ಕಾರ್ಯಕರ್ತರ ಜೈಕಾರ ಹಾಕಿದರು.
ನಂತರ ಮಿನಿ ವಿಧಾನ ಸೌಧದಲ್ಲಿ ಸಿ.ಎಸ್.ಪುಟ್ಟರಾಜು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ನಾಗಮ್ಮ, ಪುತ್ರ ಶಿವರಾಜ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ವಕೀಲ ಪುಟ್ಟೇಗೌಡ ಉಪಸ್ಥಿತರಿದ್ದರು.