ವರದಿ : ವಿ.ಎಸ್.ಪ್ರಭು
ಕ್ಷುಲಕ ಕಾರಣಕ್ಕೆ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಗಾಯಗೊಳಿಸಿರುವ ಘಟನೆ ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ.
ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಕಾಳೇಗೌಡ ಅವರ ಪುತ್ರ ಅರುಣ್ (28) ಹಲ್ಲೆಗೊಳಗಾದ ಯುವಕನಾಗಿದ್ದಾನೆ.
ಅರುಣ್ ಎಂಬ ಯುವಕನ ಮನೆ ಬಳಿ ರಾತ್ರಿ 10.30ರ ಸುಮಾರಿಗೆ ಆಗಮಿಸಿದ ಅದೇ ಗ್ರಾಮದ ಭರತ್ ಎಂಬ ಯುವಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನೆಯಿಂದ ಹೊರ ಬರುವಂತೆ ಕರೆದಿದ್ದು, ಮನೆಯಿಂದ ಹೊರ ಬಂದ ಅರುಣ್ ಮೇಲೆ ಭರತ್ ಹಲ್ಲೆ ನಡೆಸಿ ಬಳಿಕ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಈ ವೇಳೆ ತೀವ್ರವಾಗಿ ಗಾಯಗೊಂಡ ಅರುಣ್ ನನ್ನು ಮದ್ದೂರು ಮತ್ತು ಮಂಡ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂದರ್ಭದಲ್ಲಿ ಸ್ಥಳದಿಂದ ಪರಾರಿಯಾಗಿ ಬೆಂಗಳೂರಿನಲ್ಲಿ ತಲೆ ಮೆರೆಸಿಕೊಂಡಿದ್ದ ಆರೋಪಿ ಭರತ್ ನನ್ನು ಬಂಧಿಸಿ ಮದ್ದೂರು ಠಾಣೆಗೆ ಕರೆತಂದು ವಿಚಾರಣೆ ಬಳಿಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆ ಸಂಬಂಧ ಗಾಯಾಳು ಅರುಣ್ ಚಿಕ್ಕಪ್ಪ ಚನ್ನಪ್ಪ ನೀಡಿದ ದೂರಿನ ಮೇರೆಗೆ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.