ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಲು ಕಾರಣರಾದ ಎಲ್ಲಾ ಮತದಾರರಿಗೆ ನೂತನ ಶಾಸಕ ಗಣಿಗ ರವಿಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಿಜೆಪಿ ಹಾಗೂ ಜೆಡಿಎಸ್ನ ದುರಾಡಳಿತದಿಂದ ಬೇಸತ್ತು ಹಾಗೂ
ಕಾಂಗ್ರೆಸ್ನ ಆಡಳಿತದ ಮೇಲೆ ನಂಬಿಕೆಯಿಟ್ಟು ನನ್ನನ್ನು ಬೆಂಬಲಿಸಿದ ಎಲ್ಲ ಮತದಾರರಿಗೂ ಚಿರಋಣಿಯಾಗಿರುತ್ತೇನೆ. ಹಾಗೆಯೇ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ,ಪ್ರತ್ಯಕ್ಷವಾಗಿ,ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.
ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ಭರವಸೆಯನ್ನು ಖಂಡಿತವಾಗಿಯೂ ಉಳಿಸಿಕೊಳ್ಳುತ್ತೇನೆ. ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕಲ್ಪನೆ ಹಾಗೂ ಕಾರ್ಯಕ್ರಮಗಳನ್ನು ಹೊಂದಿದ್ದೇನೆ. ಪ್ರಮುಖವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶೀಘ್ರದಿಂದಲೇ ಕಾರ್ಯೋನ್ಮುಖವಾಗುತ್ತೇನೆ.
ಸರ್ಕಾರದ ರಚನೆ ಸಂಬಂಧ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದೇನೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕ್ಷೇತ್ರಕ್ಕೆ ಬಂದು ಮತದಾರರಿಗೆ ಖುದ್ದು ಧನ್ಯವಾದ ತಿಳಿಸುತ್ತೇನೆ. ಜೊತೆಗೆ ಆಗಬೇಕಿರುವ ಅಭಿವೃದ್ಧಿ ಕೆಲಸದ ಕಡೆಗೆ ಗಮನಕೊಡುತ್ತೇನೆ.ಸದಾ ನಿಮ್ಮೆಲ್ಲರ ಕಷ್ಟ ಸುಖಗಳಲ್ಲಿ ಜೊತೆಗಿರುತ್ತೇನೆ ಎಂದು ತಿಳಿಸಿದ್ದಾರೆ