ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳನ್ನೇ ಬೋಧನೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿರುವ ಸಂಘ ಪರಿವಾರದ ಚಕ್ರವರ್ತಿ ಸೂಲಿಬೆಲೆ ಯಾವ ಪಿಹೆಚ್ಡಿ ಮಾಡಿದ್ದಾರೆ, ಅವರ ಪಾಠವನ್ನು ಪಠ್ಯಪುಸ್ತಕದಿಂದ ಕೈ ಬಿಡುತ್ತೇವೆ. ಇವರೆಲ್ಲಾ ವ್ಯಾಟ್ಸ್ಆ್ಯಪ್ ಯೂನಿವರ್ಸಿಟಿಯಲ್ಲಿ ಓದೋರು, ಅತಂಹವರ ಪಾಠ ನಮ್ಮ ಮಕ್ಕಳಿಗೆ ಅಗತ್ಯವಿಲ್ಲ ಎಂದು ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಕ್ರವರ್ತಿ ಸೂಲೆಬೆಲೆ ಬರೆದಿರುವ ಪಾಠವನ್ನು ಓದಿಲ್ಲ. ಆದರೂ ಸೂಲಿಬೆಲೆ ಬರೆದಿರುವ ಪಠ್ಯವನ್ನು ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಸೂಲೆಬೆಲೆ ಬರೆದಿರುವ ಲೇಖನವನ್ನು ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಪ್ರಶ್ನಿಸಿದ ಅವರು, ನಾನು ಅವರ ಪಾಠವನ್ನು ಓದುವುದಿಲ್ಲ, ನನಗೆ ಓದಲು ಸಾಕಷ್ಟು ಪುಸ್ತಕಗಳಿವೆ. ನಮ್ಮಲ್ಲಿ ಉತ್ತಮವಾದ ಸಾಹಿತಿಗಳಿದ್ದಾರೆ, ಅವರ ಪಾಠಗಳನ್ನು ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಭಗತ್ ಸಿಂಗ್ ಬಗ್ಗೆ ನಾವು ಹೇಳುತ್ತೇವೆ, ನಾನೇಕೆ ನಾಸ್ತಿಕನಾದೆ ಎಂಬ ಭಗತ್ ಸಿಂಗ್ ಅವರ ಪುಸ್ತಕವನ್ನು ನೀವು ಓದಿದ್ದೀರಾ…? ಎಂದು ಸುದ್ದಿಗಾರರನ್ನು ಪ್ರಶ್ನಿಸಿದ ಅವರು, ಯಾರೋ ಭಗತ್ ಸಿಂಗ್ ಬಗ್ಗೆ ಬರೆದರೇ, ಅದನ್ನೆಲ್ಲ ಪಾಠ ಮಾಡೋಕೆ ಆಗಲ್ಲ. ಅದರಲ್ಲಿ ಸತ್ಯಾಂಶವಿರಬೇಕು. ನಮ್ಮಲ್ಲಿ ಒಳ್ಳೆಯ ಸಾಹಿತಿಗಳಿದ್ದಾರೆ. ಅಂತಹವರ ಪಾಠಗಳನ್ನು ಮಕ್ಕಳಿಗೆ ಬೋಧಿಸುತ್ತೇವೆಂದು ಸ್ಪಷ್ಟಪಡಿಸಿದರು.