ಕಾಂಗ್ರೆಸ್ ಮುಖಂಡರು ಜೆಡಿಎಸ್ ಮುಖಂಡರಿಂದ ಹಣ ಪಡೆದಿರುವ ಬಗ್ಗೆ ವೈರಲ್ ಆಗಿರುವ ಆಡಿಯೋ ನನ್ನದಲ್ಲ, ನನಗೂ ಆಡಿಯೋಗೂ ಸಂಬಂಧವಿಲ್ಲ ಕಾಂಗ್ರೆಸ್ ನಾಯಕರು ನಿಖರವಾದ ದಾಖಲೆಗಳನ್ನು ಇಟ್ಟುಕೊಂಡು ನನ್ನ ವಿರುದ್ಧ ಮಾತನಾಡಬೇಕು, ಆಡಿಯೋ ಮೂಲವನ್ನು ಕಾಂಗ್ರೆಸ್ ಮುಖಂಡರು ಬಹಿರಂಗಪಡಿಸಬೇಕು ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಸವಾಲು ಹಾಕಿದರು.
ಕೆ ಆರ್ ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳು ನನ್ನ ತೇಜೋವಧೆಗೆ ನನ್ನ ವಿರೋಧಿಗಳು ಸೃಷ್ಠಿಸಿರುವ ನಕಲಿ ಅಡಿಯೋ ಆಗಿದ್ದು, ಕಾಂಗ್ರೆಸ್ ನಾಯಕರ ಆರೋಪ ಸತ್ಯಕ್ಕೆ ದೂರವಾದುದಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.
ಕಾಂಗ್ರೆಸ್ ನಾಯಕರು ಹಣ ಪಡೆದಿರುವ ಬಗ್ಗೆ ಇತ್ತೀಚೆಗೆ ವೈರಲ್ ಆಗಿರುವ ಆಡಿಯೋಗೆ ತಲೆಬುಡ ಒಂದೂ ಕೂಡ ಇಲ್ಲ, ಕಾಂಗ್ರೆಸ್ ಮುಖಂಡರು ವೈರಲ್ ಆಗಿರುವ ಆಡಿಯೋ ಬಗ್ಗೆ ನನ್ನ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿರುವುದು ಸರಿಯಲ್ಲ. ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದೆ ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆಯೇ ಜೆಡಿಎಸ್ ಪಕ್ಷ ಸೇರಿ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್ ಟಿ ಮಂಜು ಅವರ ಪರವಾಗಿ ಪ್ರಾಮಾಣಿಕವಾಗಿ ದುಡಿಮೆ ಮಾಡಿ ಅಭೂತಪೂರ್ವ ಗೆಲುವು ತಂದು ಕೊಟ್ಟಿದ್ದೇನೆ. ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಆ ಪಕ್ಷದ ಸಂಘಟನೆ ಹಾಗೂ ಗೆಲುವಿಗೆ ನನ್ನ ಹೋರಾಟವು ನಿರಂತರವಾಗಿರುತ್ತದೆ ಎಂದರು.
ವೈರಲ್ ಆಗಿರುವ ಆಡಿಯೋ ಬಗ್ಗೆ ನನ್ನ ವಿರುದ್ಧ ಆರೋಪ ಮಾಡಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರ ಕುಮಾರ್ ಹಾಗೂ ವಿಜಯ ರಾಮೇಗೌಡ ಅವರ ವಿರುದ್ಧ ನಾನು ಕೂಡ ದೂರು ದಾಖಲಿಸುತ್ತೇನೆ. ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿರುವ ಈ ಇಬ್ಬರೂ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.
ವೈರಲ್ ಆಗಿರುವ ಆಡಿಯೋ ವಿಚಾರವಾಗಿ ಯಾವುದೇ ಆಣೆ ಪ್ರಮಾಣಗಳಿಗೆ ನಾನು ಸಿದ್ಧನಿದ್ದೇನೆ. ಒಬ್ಬ ವ್ಯಕ್ತಿಯ ಬಗ್ಗೆ ಆರೋಪ ಮಾಡುವವರು ಮೊದಲು ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡುವುದನ್ನು ಕಲಿಯಬೇಕು. ಆಧಾರ ರಹಿತವಾದ ಸುಳ್ಳು ಆರೋಪಗಳಿಗೆ ಯಾವುದೇ ಬೆಲೆ ಇಲ್ಲ ಎಂಬುದನ್ನು ಕಾಂಗ್ರೆಸ್ ನಾಯಕರು ಮೊದಲು ತಿಳಿದುಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಸಾರಂಗಿ ಗ್ರಾಮ ಪಂಚಾಯಿತಿ ಸದಸ್ಯ ನಂಜಪ್ಪ, ಮುಖಂಡ ಜಾಗಿನಕೆರೆ ಅಂಬರೀಶ್, ಮುಖಂಡರಾದ ವಿಶ್ವನಾಥ್, ಹೊನ್ನೇನಹಳ್ಳಿ ಸೋಮಶೇಖರ್ ಸೇರಿದಂತೆ ನೂರಾರು ಯುವ ಮುಖಂಡರು ಉಪಸ್ಥಿತರಿದ್ದರು.