ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಂಡ್ಯ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿದ ಅಧಿಕಾರಿಗಳ ವರ್ಗಾವಣೆ ಕಾರ್ಯಕ್ಕೆ ‘ಕೈ’ ಹಾಕುವ ಮೂಲಕ ಭರ್ಜರಿ ಸರ್ಜರಿಗೆ ಮುಂದಾಗಿದೆ.
ಜಿಲ್ಲೆ ಗ್ರಾಮ ಆಡಳಿತಾಧಿಕಾರಿ ವೃಂದದ 16 ಹಾಗೂ 15 ಪ್ರಥಮ ದರ್ಜೆ ಸಹಾಯಕ, ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕರನ್ನು ವರ್ಗಾವಣೆ ಸರ್ಕಾರ ಆದೇಶ ಹೊರಡಿಸಿದೆ. ಇದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಬಿಜೆಪಿ, ಜೆಡಿಎಸ್ ಮುಖಂಡರು ವರ್ಗಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ.
ಗ್ರಾಮ ಆಡಳಿತ ವೃಂದದ ನಾಗಮಂಗಲ ತಾಲ್ಲೂಕಿನ 3, ಕೆ.ಆರ್.ಪೇಟೆಯ 3, ಮದ್ದೂರಿನ 5, ಮಂಡ್ಯದ 8, ಪಾಂಡವಪುರದ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಕಂದಾಯ ಘಟಕದ ಪ್ರಥಮ ದರ್ಜೆ ಸಹಾಯಕ,ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕ ವೃಂದ 15 ಅಧಿಕಾರಿಗಳ ಪೈಕಿ ಮಂಡ್ಯದ 1, ನಾಗಮಂಗಲ ತಾಲ್ಲೂಕಿನ 3, ಮಳವಳ್ಳಿಯ 4, ಕೆ.ಆರ್.ಪೇಟೆ 4, ಮದ್ದೂರಿನ 1 ಹಾಗೂ ಶ್ರೀರಂಗಪಟ್ಟಣದ ಇಬ್ಬರು ಅಧಿಕಾರಿಗಳಿಗೆ ಸ್ಥಾನಪಲ್ಲಟವಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು ಅರಂಭದಲ್ಲಿ ಯಾವುದೇ ಅಧಿಕಾರಿಗಳ ವರ್ಗಾವಣೆಯಿಲ್ಲ ಎಂಬ ಅಶ್ವಾಸನೆ ನೀಡಿದ್ದರು. ಸದ್ಯ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಎಂಬ ಷರಾ ಬರೆದು ವರ್ಗಾವಣೆ ಅರಂಭಿಸಲಾಗಿದೆ. ಕೆಲವು ಅಧಿಕಾರಿಗಳನ್ನು ಬೇರೆ ಗ್ರಾಮಗಳಿಗೆ ನಿಯೋಜಿಸಿದ್ದರೆ, ಮತ್ತೆ ಕೆಲವರನ್ನು ತಾಲ್ಲೂಕು ಕಚೇರಿ, ನಾಡಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರ ಗ್ರಾಮಸೇವೆಗೆ ನಿಯೋಜಿಸಲಾಗಿದೆ.
ಸಹೋದ್ಯೋಗಿಗಳ ವರ್ಗಾವಣೆಯಿಂದ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದಲ್ಲಿ ಸಂಚಲನ ಮೂಡಿದೆ. ಅದಕ್ಕೆ ಪುಷ್ಠಿ ಎಂಬಂತೆ ಮತ್ತೆ ಕೆಲವರು ಅಯಕಟ್ಟಿನ ಜಾಗಗಳಿಗೆ ನಿಯೋಜಿಸಲು ಶಾಸಕರ, ಅವರ ಹಿಂಬಾಲಕರ ಬೆನ್ನು ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಂದಾಯ ಇಲಾಖೆಯ ವರ್ಗಾವಣೆ ಪರ್ವ ಅಧಿಕಾರಿ ವಲಯದಲ್ಲಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.