ಡಾ.ಜಿ. ಮಾದೇಗೌಡ ಪ್ರತಿಷ್ಟಾನದ ವತಿಯಿಂದ 23ನೇ ವರ್ಷದ ರಾಜ್ಯ ಮಟ್ಟದ ಡಾ.ಜಿ.ಮಾದೇಗೌಡ ಸಮಾಜ ಸೇವಾ ಹಾಗೂ ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜು.10ರಂದು ಸಂಜೆ 5 ಗಂಟೆಗೆ ಮಂಡ್ಯನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಪ್ರತಿಷ್ಟಾನದ ಮುಖ್ಯಸ್ಥ ಬಿ.ಬಸವರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸಾವಯುವ ಕೃಷಿಕ ಪ್ರಶಸ್ತಿಯನ್ನು ಪಿರಿಯಾಪಟ್ಟಣ ತಾಲ್ಲೂಕಿನ ಕೆ. ಬಸವನಹಳ್ಳಿ ಗ್ರಾಮದ ಕುಳ್ಳೇಗೌಡರಿಗೆ ನೀಡಲಾಗುತ್ತಿದೆ. ಅವರು ಕೃಷಿಯನ್ನೇ ತಪಸ್ಸಾಗಿಸಿಕೊಂಡು ಪ್ರಯೋಗಶೀಲ ಕೃಷಿಕರಾಗಿ ಉಳುಮರಹಿತ ಹಾಗೂ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಸುತ್ತಮುತ್ತಲಿನ ರೈತರಿಗೆ ಸಾವಯವ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದರು.
ಈ ವರ್ಷದ ಸಮಾಜ ಸೇವಾ ಪ್ರಶಸ್ತಿಗೆ ಪಶುವೈದ್ಯ ಡಾ. ಕೆ.ಎಸ್. ಜಯರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಡ್ಯದ ಕಚ್ಚೀಗೆರೆ ಗ್ರಾಮದವರಾದ ಅವರು, ಇಂದಿಗೂ ತಮ್ಮ ಮನೆಯ ಬಳಿ ಪಶು, ಪಕ್ಷಿಗಳಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದಾರೆ ಎಂದರು. ಈ ಇಬ್ಬರು ಸಾಧಕರಿಗೆ ತಲಾ 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಡಾ.ಜಿ. ಮಾದೇಗೌಡ ಪ್ರತಿಷ್ಠಾನವು ಗೌರವಿಸಲಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಹಿಸುವರು. ಮಾಜಿ ಸಂಸದರು ಬಿ.ಎಲ್ ಶಂಕರ್ ರವರು ಪ್ರಶಸ್ತಿ ಪ್ರದಾನ ಮಾಡುವರು. ಶಾಸಕರಾದ ಪಿ. ರವಿಕುಮಾರ್ಗೌಡ (ಗಣಿಗ) ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಧಾನ ಪರಿಷತ್ನ ಶಾಸಕ ಮಧು ಜಿ. ಮಾದೇಗೌಡ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ನಾಗೇಂದ್ರ, ನಿವೃತ್ತ ಪ್ರಾಂಶುಪಾಲ ರಾಮಕೃಷ್ಣ, ಪ್ರಾಧ್ಯಾಪಕ ಮಹದೇವಸ್ವಾಮಿ ಹಾಗೂ ಚೇತನ್ ಉಪಸ್ಥಿತರಿದ್ದರು.