ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜ ಅವರನ್ನು ಅವರ ಬಳಗದಲ್ಲೇ ಇದ್ದವರೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಪೊಲೀಸರು ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಆಶ್ರಮದಲ್ಲೇ ಜೈನಮುನಿಯವರನ್ನು ಕೊಲೆ ಮಾಡಿ, ಸಂಬಂಧಿಕರ ಗದ್ದೆಯಲ್ಲಿ ಶವ ಎಸೆದಿರುವುದಾಗಿ ಬಂಧಿತ ಇಬ್ಬರು ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ‘ಶ್ರೀಗಳಿಗೆ ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಲಾಗಿದೆ ಎಂದು ಶ್ರೀಗಳ ಪೂರ್ವಾಶ್ರಮದ ಸಂಬಂಧಿ ಪ್ರದೀಪ್ ಎನ್ನುವವರು ತಿಳಿಸಿದ್ದಾರೆ.
ಶ್ರೀಗಳನ್ನು ಹತ್ಯೆ ಮಾಡಿದ ನಂತರ ಮೃತದೇಹವನ್ನು ಪೀಸ್ ಪೀಸ್ ಮಾಡಿ, ಕೊಳವೆ ಬಾವಿಗೆ ಹಾಕಿದ್ದಾರೆ. ಕೊಲೆ ಮಾಡಿದ ಆರೋಪಿಯು ನಿನ್ನೆಯಷ್ಟೆ ನಮ್ಮ ಜೊತೆಗೆ ಇದ್ದ. ನಮ್ಮ ಜೊತೆಯಲ್ಲಿ ಗದ್ದೆಯಲ್ಲಿ ಹುಡುಕಾಟದ ನಾಟಕ ಕೂಡ ಮಾಡಿದ್ದ, ಬಳಿಕ ಪೊಲೀಸರಿಗೆ ಅನುಮಾನ ಬಂದು ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಳಿಕ ಶ್ರೀಗಳ ಹತ್ಯೆ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ 2 ದಿನಗಳ ಹಿಂದೆಯಷ್ಟೆ ಶ್ರೀಗಳು ಕಾಣಿಯಾಗಿದ್ದರು. ಎಲ್ಲೆಡೆ ಆಶ್ರಮದವರು ಹುಡುಕಾಟ ನಡೆಸಿದ್ದರು.
ಕೊಲೆಗೆ ಕಾರಣವೇನು?
ಮೂಲತಃ ಖಟಕಬಾವಿ ಗ್ರಾಮದವನೇ ಆದ ಪ್ರಮುಖ ಆರೋಪಿ, ಜೈನಮುನಿಗಳನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈತ ಜೈನಮುನಿಗಳ ವಿಶ್ವಾಸಗಳಿಸಿ ಹಿರೇಕೋಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ. ಬಳಿಕ ಇದನ್ನೇ ಲಾಭ ಮಾಡಿಕೊಂಡು ಅವರ ಬಳಿ ಲಕ್ಷಾಂತರ ರೂಪಾಯಿ ಹಣವನ್ನ ಪಡೆದಿದ್ದ. ಇದೇ ಹಣವನ್ನ ವಾಪಸ್ ಕೇಳಿದ್ದಕ್ಕೆ ಇದೀಗ ಜೈನಮುನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಜೈನಮುನಿಗಳು ಗುರುವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಭಕ್ತರು ಪೊಲೀಸರಿಗೆ ದೂರು ನೀಡಿದ್ದರು. ಟ್ರಸ್ಟ್ನ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ದೂರನ್ನು ದಾಖಲಿಸಿದ್ದರು. ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಉಪ ಎಸ್ಪಿ ಬಸವರಾಜ ಯೆಲಿಗಾರ ತಿಳಿಸಿದ್ದಾರೆ.