2025 ರ ವೇಳೆಗೆ ಕ್ಷಯ ಮುಕ್ತ ಸಮಾಜಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೀಣಾ ಹೇಳಿದರು.
ಶ್ರೀರಂಗಪಟ್ಟಣದ ಕಾವೇರಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ”ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ’ ಕಾರ್ಯಕ್ರಮದ ತಾಲೂಕು ಮಟ್ಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಯ್ಕೆಗೊಂಡ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ತಂಡ ಮನೆ ಮನೆ ಸಮೀಕ್ಷೆ ನಡೆಸುವಾಗ ಕ್ಷಯರೋಗದ ಲಕ್ಷಣಗಳನ್ನು ಅರಿತುಕೊಂಡು ಸಂಶಯದ ವ್ಯಕ್ತಿಗಳನ್ನು ಕಫ ಪರೀಕ್ಷೆಗೆ ಸಹಕರಿಸುವ ಮೂಲಕ ಈ ಆಂದೋಲನ ಕಾರ್ಯಕ್ರಮಕ್ಕೆ ಯಶಸ್ಸನ್ನು ತಂದು ಕೊಡಬೇಕಾಗಿ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್ ಕೆ ವೆಂಕಟೇಶ್ ಮಾತನಾಡಿ, ಪ್ರಸ್ತುತ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಒಟ್ಟು 93 ಸಕ್ರಿಯ ಕ್ಷಯ ರೋಗಿಗಳಿದ್ದು, ಎಲ್ಲರಿಗೂ ಉಚಿತವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ .ಇವರಿಂದ ಹರಡಿರಬಹುದಾದ ಇನ್ನಿತರರಿಗೂ ಕಫ ಪರೀಕ್ಷೆ, ಎಕ್ಸ್ ರೇ, ಹಾಗೂ ಸಿಬಿ ನಾಟ್ ನಂತಹ ಪರೀಕ್ಷೆಗಳನ್ನು ನಡೆಸಿ ಕ್ಷಯರೋಗ ಪತ್ತೆ ಹಚ್ಚಿ ಸಂಪೂರ್ಣ ಚಿಕಿತ್ಸೆಯನ್ನು ನೀಡಿದಲ್ಲಿ 2025ರ ವೇಳೆಗೆ ಕ್ಷಯ ಮುಕ್ತ ಶ್ರೀರಂಗಪಟ್ಟಣ ಘೋಷಿಸಲು ಸಹಕಾರಿಯಾಗಲಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, ಒಬ್ಬ ಸಕ್ರಿಯ ಕ್ಷಯರೋಗಿಯು ಚಿಕಿತ್ಸೆ ಪಡೆಯದೆ ಇದ್ದಲ್ಲಿ ಒಂದು ವರ್ಷದಲ್ಲಿ 10 ರಿಂದ 15 ಜನರಿಗೆ ಕ್ಷಯ ರೋಗ ಹರಡಿಸಬಹುದು. ಆದ್ದರಿಂದ ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡಲು ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆ ಒಂದೇ ದಾರಿ ಎಂದು ತಿಳಿಸಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ ಕ್ಷಯರೋಗದ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಚೇರಿಯಿಂದ ಮೇಲ್ವಿಚಾರಕ ಪ್ರಕಾಶ್, ಮುಖ್ಯೋಪಾಧ್ಯಾಯರಾದ ಕುಮಾರಸ್ವಾಮಿ, ಸಹ ಶಿಕ್ಷಕರಾದ ಚಂದ್ರಶೇಖರ, ಪಾರ್ವತಮ್ಮ, ಮಂಜುನಾಥ್, ರಾಧಾ ದೈಹಿಕ ಶಿಕ್ಷಕ ಪಾಪಣ್ಣ ಹಾಗೂ ಕ್ಷಯ ರೋಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಮಹೇಶ್ ಮತ್ತು ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕ ಸುಹೇಲ್ ಅಹ್ಮದ್, ಕ್ಷಯರೋಗ ಸಂದರ್ಶಕ ಪ್ರಭಾಕರ್, ಆರೋಗ್ಯ ನಿರೀಕ್ಷಣಾಧಿಕಾರಿ ಎಮ್ ಸಿ ಚಂದನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರಬೇಕಾ ಉಪಸ್ಥಿತರಿದ್ದರು..