ಭಾರತ ಸೇವಾದಳವು ಪ್ರಾಥಮಿಕ-ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ ಎಂದು ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ರಮೇಶ್ ಹೇಳಿದರು.
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಾಂಡವಪುರ ಇವರ ಸಹಯೋಗದಲ್ಲಿ ನಡೆದ 2 ದಿನಗಳ ವಿದ್ಯಾರ್ಥಿಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಜೊತೆಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ಸಂಹಿತೆಗಳನ್ನು ತಿಳಿದುಕೊಳ್ಳಬೇಕಿದೆ, ಭಾರತ ಸೇವಾದಳದಿಂದ ನಾಯಕತ್ವ ಗುಣಗಳನ್ನು ಬೆಳಸುವ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ ಎಂದರು.
ಭಾರತ ಸೇವಾ ದಳದ ಜಿಲ್ಲಾ ಸಮಿತಿಯ ಸಂಘಟಕ ಗಣೇಶ್, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ರಾಷ್ಟ್ರಧ್ವಜ ಹಾರಿಸುವುದು, ರಾಷ್ಟ್ರಗೀತೆಯ ಸಂಹಿತೆಗಳನ್ನು ತಿಳಿದುಕೊಳ್ಳಬೇಕು, ಕ್ರೀಡೆ ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ಶಿಸ್ತು, ಸಂಯಮ, ನಾಯಕತ್ವಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಪ್ರಜೆ, ಅಧಿಕಾರಿ, ಉನ್ನತಮಟ್ಟದ ಉದ್ಯಮಿಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಟರಾಜ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮಪ್ರಸಾದ್, ಸಿಆರ್ಪಿ ರಾಮಕೃಷ್ಣೇಗೌಡ, ಸೇವಾದಳದ ಶಿಕ್ಷಕ ಕಾಂತರಾಜು ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು.