ನಮ್ಮ ಭಾರತದೇಶ ಹಲವಾರು ಯುದ್ಧಗಳನ್ನು ಎದುರಿಸಿದೆ, ಹಲವು ಯುದ್ದಗಳನ್ನು ಗೆದ್ದಿದೆ, ಆದರೆ ಕಾರ್ಗಿಲ್ ಯುದ್ಧ ಯಾಕೆ ವಿಶೇಷವಾಗಿ ಆಚರಣೆಯಾಗುತ್ತಿದೆ ಎಂದರೆ, ಐದು-ಆರು ಸಾವಿರ ಅಡಿ ಎತ್ತರದ ಮೊನಚಾದ ಬೆಟ್ಟಗುಡ್ಡಗಳ ಕಠಿಣ ಶೀತಪ್ರದೇಶದಲ್ಲಿ ಯುದ್ಧ ನಡೆದಿದೆ, ಆದ್ದರಿಂದ ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ಎ.ಸಿ.ರಮೇಶ್ ಹೇಳಿದರು.
ಮಂಡ್ಯ ನಗರದ ಮಾಜಿ ಪುರಸಭೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆ ಹಾಗೂ ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಎನ್ ವೈ ಕೆ, ಜಿಲ್ಲಾಡಳಿತ, ಅನನ್ಯ ಆರ್ಟ್ಸ್ ಸಂಸ್ಥೆ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಸರ್ಕಾರಿ ಪದವಿ ಪೂರ್ವ ಕಾಲೇಜು ಮಾಜಿ ಪುರಸಭೆ ಇವರ ಸಹಕಾರದೊಂದಿಗೆ ಆಯೋಜಿಸಿರುವ “64ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಮತ್ತು ನಿವೃತ್ತ ಯೋಧರಿಗೆ ಅಭಿನಂದನಾ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದು ಒಂದು ಒಪ್ಪಂದಕ್ಕೆ ಸಹಿ ಹಾಕಿರುತ್ತಾರೆ, ಅಪಾಯಕಾರಿ ಶೀತಪ್ರದೇಶಗಳಲ್ಲಿ 2 ದೇಶಗಳ ಸೈನಿಕ ಇರುವಂತಿಲ್ಲ, ಯಾವುದೇ ಹಾನಿ, ದಾಳಿ ಮಾಡದಂತೆ ಇರುವ ಬಗ್ಗೆ ಒಪ್ಪಂದವಾಗಿರುತ್ತದೆ, ಆದರೆ ಪಾಪಿ ಪಾಕಿಸ್ತಾನ ರಾತ್ರೋರಾತ್ರಿ ಕಾರ್ಗಿಲ್ಜಾಗಕ್ಕೆ ದಾಳಿ ಮಾಡಿ ವಶಪಡಿಸಿಕೊಂಡಿರುತ್ತದೆ ಎಂದು ನುಡಿದರು.
ಕುರಿಗಾಯಿಗಳ ಮಾಹಿತಿಯಿಂದ ಭಾರತದೇಶದ ಪ್ರಧಾನಮಂತ್ರಿ ಮಾಹಿತಿ ತಿಳಿಸಿ, ಪರಿಶೀಲನೆಗಾಗಿ 5 ಸೈನಿಕರನ್ನು ಕಳಿಸಿದಾಗ ಪಾಕಿಸ್ಥಾನಿ ಸೈನಿಕರು ನಮ್ಮ ಯೋಧರನ್ನು ಚಿತ್ರಹಿಂಸೆ ನೀಡಿ ಕೊಂದುಬಿಡುತ್ತಾರೆ, ತಕ್ಷಣವೇ ಪ್ರಧಾನಮಂತ್ರಿಗಳು ಯುದ್ಧವನ್ನು ಘೋಷಿಸಿ, ಭಾರತ ಸರ್ಕಾರ ಇಪ್ಪತ್ತು ಸಾವಿರ ಭಾರತೀಯ ಸೈನಿಕರನ್ನ ಸಜ್ಜುಗೊಳಿಸಿ ಮೇ 3 ರಿಂದ ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ ಆರಂಭಿಸಿ, ಅಂತಿಮವಾಗಿ ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿದರು ಎಂದು ಸ್ಮರಿಸಿದರು.
ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ ‘ಆಪರೇಷನ್ ತಲ್ವಾರ್’ ಅನ್ನು ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಪಾಕಿಸ್ತಾನಿಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಜುಲೈ 24 ರಂದು ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತ ಯುದ್ಧ ಗೆದ್ದಿತು. ಇದಾದ ಬಳಿಕ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ನೋಟರಿ ಸಂಸ್ಥೆಯ ಅಧ್ಯಕ್ಷೆ ಅನುಪಮಾ ಮಾತನಾಡಿ, 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು. ಈ ಯುದ್ದದಲ್ಲಿ ಅನೇಕ ವಿರ ಯೋಧರು ಹುತಾತ್ಮರಾದರು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಿ. ಗುರುಲಿಂಗೇಗೌಡ ವಹಿಸಿದ್ದರು. ರೋಟರಿ ಸಂಸ್ಥೆಯ ಜಿಲ್ಲಾ ಸದಸ್ಯ ಶಂಕರ್ನಾರಾಯಣ ಶಾಸ್ತ್ರಿ, ಜೀವಧಾರ ಟ್ರಸ್ಟ್ ಅಧ್ಯಕ್ಷ ನಟರಾಜು, ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ. ಬಸವರಾಜು, ರೋಟರಿ ಕಾರ್ಯದರ್ಶಿ ರಾಜೇಶ್, ಬರ್ನಾಡಪ್ಪ, ಎನ್.ವೈ ಕೆ ಕಚೇರಿಯ ಲೆಕ್ಕಾಧಿಕಾರಿ ರವಿಚಂದ್ರ, ಸ್ವಯ ಸೇವಕ ಹರ್ಷ, ತಂಬಾಕು ನಿಯಂತ್ರಣ ಕೋಶಾಧಿಕಾರಿ ತಿಮ್ಮರಾಜು, ಉಪನ್ಯಾಸಕಿ ಟಿ.ಎನ್.ಮಾಲಿನಿ ಮತ್ತಿತರರಿದ್ದರು.