ಮಾನವನ ದುರಾಸೆಯಿಂದಾಗಿ ಕಾಡು ವಿನಾಶನದ ಹಂಚು ತಲುಪಿದೆ, ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಕಾಡು ಕಣ್ಮರೆಯಾದಂತೆ ಪ್ರಕೃತಿ ವಿಕೋಪದಂತಹ ಘಟನೆಗಳು ಮರುಕಳಿಸುತ್ತವೆ ಎಂದು ಪರಿಸರ ಜಾಗೃತ ವೇದಿಕೆ ಅಧ್ಯಕ್ಷ ಅಣ್ಣೂರು ಸತೀಶ್ ಹೇಳಿದರು.
ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಭಾರತೀ ಶಿಕ್ಷಣ ಸಂಸ್ಥೆಯ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಶಿಬಿರದಲ್ಲಿ ಪರಿಸರ ಜಾಗೃತಿ ವೇದಿಕೆಯಿಂದ ನಡೆದ ಪರಿಸರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಸರವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ, ಈ ನಿಟ್ಟಿನಲ್ಲಿ ನಾವು ಗಮನಹರಿಸಬೇಕೆಂದು ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕ ಗೊರವಾಲೆ ಜಯಶಂಕರ್ ಮಾತನಾಡಿ, ವಿಜ್ಙಾನ ಮುಂದುವರೆದಂತೆಲ್ಲ, ಪರಿಸರ ಸಮತೋಲನ ತಪ್ಪುತ್ತಿದೆ. ಪ್ರತೀ ವ್ಯಾಪಾರ ವಹಿವಾಟಿನಲ್ಲೂ ಕೂಡ ಪ್ಲಾಸ್ಟಿಕ್ನದ್ದೇ ಕಾರುಬಾರು. ಪ್ಲಾಸ್ಟಿಕ್ ಇಲ್ಲದೆ ವ್ಯಾಪಾರವೇ ಇಲ್ಲವೆಂಬಂತಾಗಿದೆ. ಈ ರೀತಿಯ ಪ್ಲಾಸ್ಟಿಕ್ನಿಂದ ಪರಿಸರದ ಆರೋಗ್ಯ ಸಂಪೂರ್ಣ ಹಾಳಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಅಣ್ಣೂರು ಜಗದೀಶ್ ಮಕ್ಕಳಿಗೆ ಪರಿಸರದ ಸಂರಕ್ಷಣೆಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ವೇಳೆ ಪರಿಸರ ಜಾಗೃತಿ ವೇದಿಕೆಯ ಉಪಾಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಕರಡಕೆರೆ ವಸಂತಮ್ಮ, ಸಬ್ಬನಹಳ್ಳಿ ಕುಮಾರ್, ಸದಸ್ಯರಾದ ಆನಂದ್, ಆಸರೆ ರಘು ವೆಂಕಟೇಗೌಡ, ಮನೋಜ್, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಕೆ.ಸಿ.ಸುಂದರೇಶ್, ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ್, ಎಂ.ಸಿ.ರಂಜಿತ್ ಉಪಸ್ಥಿತರಿದ್ದರು.