ಡಿಎಂಕೆಯನ್ನು ವಂಶ ರಾಜಕಾರಣ ಪಕ್ಷ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ತಿರುಗೇಟು ನೀಡಿದ್ದಾರೆ.
ಚೆನ್ನೈನಲ್ಲಿ ಡಿಎಂಕೆ ಯುವ ಘಟಕದ ನೂತನ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, “ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗಿ ಮಂತ್ರಿ ಸ್ಥಾನ ಪಡೆದಿದ್ದೇನೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿರುವ ನಿಮ್ಮ ಪುತ್ರ ಎಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿ ಎಷ್ಟು ರನ್ ಗಳಿಸಿದ್ದಾರೆ” ಎಂದು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದ್ದಾರೆ.
“ನಮ್ಮ ಪಕ್ಷದ ನಾಯಕರು ನನ್ನನ್ನು ಮುಖ್ಯಮಂತ್ರಿ ಮಾಡುವ ಗುರಿ ಹೊಂದಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ನಾನು ಅಮಿತ್ ಶಾ ಅವರನ್ನು ಕೇಳಲು ಬಯಸುತ್ತೇನೆ, ನಿಮ್ಮ ಮಗ ಬಿಸಿಸಿಐ ಕಾರ್ಯದರ್ಶಿಯಾದದ್ದು ಹೇಗೆ?” ಎಂದರು.
“ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು 2014ರಿಂದ ನಿಮ್ಮ ಮಗ ಜಯ್ ಶಾ, ಜೈನ್ ಕುಸುಮ್ ಫಿನ್ಸರ್ವ್ ಎಂಬ ಕಂಪನಿಯನ್ನು ನಡೆಸುತ್ತಿದ್ದರು. ಆಗ ಕುಸುಮ್ ಫಿನ್ಸರ್ವ್ನ ಮೌಲ್ಯವು ಕೇವಲ 75 ಲಕ್ಷ ರೂ. ಇತ್ತು. ಈಗ ಅದರ ಮೌಲ್ಯ ಎಷ್ಟಾಗಿದೆ ಎಂದು ತಿಳಿಸುವಿರಾ? ಎಂದು ಉದಯನಿಧಿ ಸ್ಟಾಲಿನ್ ಟೀಕಿಸಿದರು.
ಶುಕ್ರವಾರ (ಜುಲೈ 28) ರಾಮೇಶ್ವರಂನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರ ಪಾದಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ ಅವರು ಡಿಎಂಕೆಯ ವಂಶ ರಾಜಕಾರಣದ ಬಗ್ಗೆ ಮಾತನಾಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಡಿಎಂಕೆ ಮಿತ್ರಪಕ್ಷಗಳು ವಂಶ ರಾಜಕಾರಣಕ್ಕೆ ಉತ್ತೇಜಿಸುತ್ತಿದ್ದಾರೆ. ಅವರದು ವಂಶ ರಾಜಕೀಯ ಪಕ್ಷ ಎಂದು ಆರೋಪಿಸಿದ್ದರು.
ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಎನ್ ಮಣ್, ಎನ್ ಮಕ್ಕಳ್(ನನ್ನ ನೆಲ, ನನ್ನ ಜನ) ಅಭಿಯಾನ ಆರಂಭಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ ನೀಡಿದ್ದರು.
5 ಹಂತದಲ್ಲಿ 1774 ಕಿಲೋ ಮೀಟರ್ನ ಈ ಪಾದಯಾತ್ರೆಯು ತಮಿಳುನಾಡಿನ 234 ವಿಧಾನಸಭೆ, 39 ಲೋಕಸಭೆ ಕ್ಷೇತ್ರಗಳನ್ನು ಒಳಗೊಳ್ಳಲಿದೆ. 2024ರ ಜನವರಿ 11ರಂದು ಯಾತ್ರೆ ಅಂತ್ಯಗೊಳ್ಳಲಿದೆ.