ಬಿಜೆಪಿಯವರು ಸುಮ್ಮನೆ ಕಮಿಷನ್ ಆರೋಪ ಬಿಟ್ಟು ವಿಪಕ್ಷ ನಾಯಕನನ್ನು ಹುಡುಕುವ ಪ್ರಯತ್ನ ಮಾಡಲಿ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಕಮಿಷನ್ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ಎಲ್ಲಿ ಹೋಗಿ ಧ್ವನಿ ಏರಿಸಬೇಕು, ಅಲ್ಲಿ ಇವರು ಮಾತನಾಡುತ್ತಿಲ್ಲ. ಕೇಂದ್ರದ ನಾಯಕರ ಬಳಿ ಹೋಗಿ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದು ಜೋರಾಗಿ ಮಾತನಾಡಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಬೇಡ ಎಂದು ತಿವಿದರು.
ಗುತ್ತಿಗೆದಾರರ ಸಂಘದವರು ಕಮಿಷನ್ ಕೇಳಿದ್ದಾರೆ ಎಂದು ಹೇಳಿಲ್ಲ. ಬಿಲ್ ವಿಳಂಬ ಆಗುತ್ತಿದೆ ಎಂದು ಮಾತ್ರ ಹೇಳಿದ್ದಾರೆ. ಡಿಸಿಎಂ, ಸಚಿವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಕೆಲಸ ನೋಡಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬಿಜೆಪಿಗೆ ಯಾಕೆ ಇಷ್ಟು ಆಸಕ್ತಿ? ಬಿಜೆಪಿಯವರು ಈಗಾಗಲೇ ಏನಾದರೂ ಹಣ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಕಾಮಗಾರಿ ನೋಡಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸಿಎಂ ಮತ್ತು ಡಿಸಿಎಂ ಹೇಳಿದ್ದಾರೆ. ಬಿಜೆಪಿಗೆ ಯಾಕೆ ಇಷ್ಟು ಆತಂಕ? ಕಾಮಗಾರಿ ಆಗದೇ ಹಣ ಎತ್ತಿದ್ದು ಬಿಜೆಪಿಯವರು. ಅದಕ್ಕೆ ಈ ಆತಂಕ. ಬಿಜೆಪಿ ಅವರು ಮೊದಲು ವಿಪಕ್ಷ ಸ್ಥಾನ ನೇಮಕ ಮಾಡಲಿ. ಪ್ಲೇಯಿಂಗ್ 11ನೇ ವ್ಯಕ್ತಿಯನ್ನು ಬಿಟ್ಟು 12ನೇ ವ್ಯಕ್ತಿಯನ್ನು ವಿಪಕ್ಷ ಸ್ಥಾನ ಮಾಡಲು ಹೊರಟಿದ್ದಾರೆ ಎಂದು ಟಾಂಗ್ ನೀಡಿದರು.