ಮಂಡ್ಯ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 9ರಂದು ನಡೆದ ರಾಷ್ಟ್ರೀಯ ಲೋಕ್-ಅದಾಲತ್ಗೆ ವಕೀಲರಿಂದ, ಕಕ್ಷಿಗಾರರಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಒಟ್ಟು 4031 ಪ್ರಕರಣಗಳು ಹಾಗೂ ಜಿಲ್ಲೆಯ ಒಟ್ಟು 27,525 ವ್ಯಾಜ್ಯ ಪೂರ್ವ ಪ್ರಕರಣಗಳು, ಈ ರೀತಿ ಒಟ್ಟು 31,556 ಪ್ರಕರಣಗಳು ಇತ್ಯರ್ಥವಾಗಿದೆ.
ಮಂಡ್ಯ ನಗರದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 23,993 ಪ್ರಕರಣಗಳು, ಮದ್ದೂರಿನ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1558 ಪ್ರಕರಣಗಳು, ಶ್ರೀರಂಗಪಟ್ಟಣದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1641 ಪ್ರಕರಣಗಳು, ಪಾಂಡವಪುರದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 450 ಪ್ರಕರಣಗಳು, ಮಳವಳ್ಳಿಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1462 ಪ್ರಕರಣಗಳು, ನಾಗಮಂಗಲದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 496 ಪ್ರಕರಣಗಳು ಹಾಗೂ ಕೆ.ಆರ್.ಪೇಟೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1956 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಾಣಿ ಎ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಂಪತ್ಯದಲ್ಲಿ ಬಿರುಕು ಮೂಡಿ ವಿವಾಹ ವಿಚ್ಚೇದನಕ್ಕೆ ಮಂಡ್ಯ ಜಿಲ್ಲೆಯ ವಿವಿಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕೆಲವು ವರುಷಗಳ ಬಳಿಕ ಆರು ಜೋಡಿ ದಂಪತಿಗಳು ಸೆ.9ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಂದಾಗಿರುವುದು ವಿಶೇಷವಾಗಿತ್ತು. ದಂಪತಿಗಳ ದಾಂಪತ್ಯದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಕಂಡುಬಂದು, ನ್ಯಾಯಾಲಯದಲ್ಲಿ ವರ್ಷಗಳಿಂದ ಪ್ರಕರಣ ನಡೆದು ವಿವಾಹ ವಿಚ್ಚೇದನ ಹಂತ ತಲುಪಿತ್ತು. ಅದಾಲತ್ನಲ್ಲಿ ಈ ದಂಪತಿಗಳ ಭಿನ್ನಾಭಿಪ್ರಾಯ ನಿವಾರಣೆಗೆ ನಿರಂತರವಾಗಿ ನ್ಯಾಯಾಧೀಶರು, ವಕೀಲರು ಹಾಗಾ ಸಂಧಾನಕಾರರು ನಡೆಸಿದ ರಾಜಿ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಆರು ಜೋಡಿಗಳು ಸಹ ದಾಂಪತ್ಯದ ತಪ್ಪು ಸಹ ದಾಂಪತ್ಯದ ತಪ್ಪು ತಿಳುವಳಿಕೆಗಳನ್ನು ಸರಿಪಡಿಸಿಕೊಂಡು ಮುಂದೆ ಯಾವುದೇ ಭಿನ್ನಾಭಿಪ್ರಾಯ ಬರದಂತೆ ಸಂತೋಷದಿಂದ ದಾಂಪತ್ಯ ಜೀವನ ನಡೆಸಿಕೊಂಡು ಹೋಗಲು ಮತ್ತೆ ಒಂದಾದರು.
ಲೋಕ್ ಅದಾಲತ್ ನಲ್ಲಿ ಭಾಗವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಜಿ.ರಮಾ ಇವರು ಮಂಡ್ಯದ ನ್ಯಾಯಾಲಯದಲ್ಲಿ ಒಂದಾದ ನಾಲ್ಕು ಜೋಡಿಗಳಿಗೆ ಮದುವೆಯ ಬಾಂಧವ್ಯದ ಪಾವಿತ್ರತೆ ಹಾಗೂ ಸಾಮರಸ್ಯದ ಬದುಕಿನ ಬಗ್ಗೆ ಕಿವಿಮಾತು ಹೇಳಿ ಶುಭಾಶಯ ಕೋರಿದರು, ನಾಲ್ಕು ಜೋಡಿಗಳು ನ್ಯಾಯಾಲಯದಲ್ಲಿ ಹಾರ ಬದಲಾಯಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನ್ಯಾಯಾಲಯದಲ್ಲಿ ಹಾಜರಿದ್ದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು ಹಾಗೂ ಸಾರ್ವಜಿನಿಕರು ಈ ಶುಭ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.