ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿಯು ಕಂದಾಯ ಭೂಮಿಯನ್ನು ಜಿಲ್ಲಾಧಿಕಾರಿಯ ಅನುಮತಿಯಿಲ್ಲದೆ ಅಕ್ರಮ ಖಾತೆ ಮಾಡಿ, ಸ್ವಯಂಸೇವಾ ಸಂಸ್ಥೆಗೆ ನೀಡುವ ಮೂಲಕ ಭ್ರಷ್ಟಾಚಾರವೆಸಗಿದೆ ಎಂದು ಆರೋಪಿ ಬೂದನೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ದೂರು ಸಲ್ಲಿಸಿದರು
ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಯಲ್ಲಿ ಸರ್ವೇ ನಂ.87ರ ಸರ್ಕಾರಿ ಭೂಮಿಯನ್ನು ಜಿಲ್ಲಾಧಿಕಾರಿ ಅಥವಾ ಕಂದಾಯ ಇಲಾಖೆಯ ಅನುಮತಿ ಇಲ್ಲದೆ, ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಅಕ್ರಮ ಖಾತೆ ಮಾಡಿ ಅಕ್ರಮ ನಡೆಸಿದೆ ಎಂದು ದಾಖಲೆ ಸಹಿತ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಕಂದಾಯ ಇಲಾಖೆಯ ಭೂಮಿಯನ್ನು ಸೇವಾಕಿರಣ ಕ್ಷೇಮಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಎಂಬ ಸಂಸ್ಥೆಗೆ 120 X 220 ಹಾಗೂ 80 X 100 ಅಳತೆಯ 2 ನಿವೇಶನವನ್ನು ಯಾವುದೇ ದಾಖಲೆ, ನಿರ್ಣಯ ಮಾಡದೇ ಕರ ನಿರ್ಧರಣ ಪಟ್ಟಿಗೆ ಸೇರಿಸಲಾಗಿದೆ. ಅ ಮೂಲಕ ಕಂದಾಯ ಭೂಮಿಯ ಅಕ್ರಮ ಪ್ರವೇಶಕ್ಕೆ ಅವಕಾಶ ನೀಡಿ ಗ್ರಾಪಂ ಆಡಳಿತ ಭ್ರಷ್ಟಾಚಾರ, ಕರ್ತವ್ಯ ಲೋಪ ಎಸಗಲಾಗಿದೆ ಎಂದು ದೂರಿದರು.
ಸೇವಾಕಿರಣ ಚಾರಿಟಬಲ್ ಸಂಸ್ಥೆ ಅಕ್ರಮ ದಾಖಲೆಯನ್ನು ರಾಜ್ಯಪಾಲರಿಗೆ ನೀಡಿ ಸಂಸದರಾದ ಅಂಬರೀಶ್, ಜಯಶ್ರೀ ಹಾಗೂ ವಿಧಾನ ಪರಿಷತ್ ಸದಸ್ಯರಾಗಿದ್ದ ಮುಖ್ಯಮಂತ್ರಿ ಚಂದ್ರು ಅವರ ಅನುದಾನ ಪಡೆದು ದುರುಪಯೋಗಪಡಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುಮುಖ್ಯವಾಗಿ ಸೇವಾಕಿರಣ ಕ್ಷೇಮಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ರಾಜ್ಯಪಾಲರಿಗೆ ಸುಳ್ಳು ದಾಖಲೆ ನೀಡಿ ರಾಜದ್ರೋಹವೆಸಗಿದೆ. ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ‘ಸ್ವಂತ ಮನೆ ನಮ್ಮ ಹಕ್ಕು’ ಹೋರಾಟ ಸಮಿತಿ ಸಂಚಾಲಕ ಬೂದನೂರು ಸತೀಶ, ಸಂಗೀತಾ, ಮಂಗಳ, ದೇವಮ್ಮ ಮತ್ತಿತರರಿದ್ದರು.