ಮಂಡ್ಯ ತಾಲ್ಲೂಕಿನ ಹೆಮ್ಮಿಗೆ ಗ್ರಾಮದ ಜಾನಪದ ಗಾಯಕ, ರಂಗಭೂಮಿ ಕಲಾವಿದ ಹಾಗೂ ಸಂಘಟಕ ಹೆಚ್.ಎಸ್. ಶಿವಣ್ಣ ಅವರಿಗೆ ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆ ನೀಡುವ ರಾಜ್ಯ ಮಟ್ಟದ 2023ನೇ ಸಾಲಿನ ‘ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ’ ದೊರೆತಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಟಿ ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಸಿಂಧುಶ್ರೀ ಕಲಾ ಸಂಸ್ಥೆಯ
ಸಂಸ್ಥಾಪಕ ಅಧ್ಯಕ್ಷರಾಗಿರುವ ಹೆಮ್ಮಿಗೆ ಶಿವಣ್ಣ ಅವರು ಗಾಯನ, ರಂಗಭೂಮಿ ಹಾಗೂ ಸಾಂಸ್ಕೃತಿಕ ಸಂಘಟನೆಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅವಿರತ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾಸನದ ಸಂಸ್ಕೃತ ಭವನದಲ್ಲಿ ಸೆ.24 ರಂದು ಬೆಳಗ್ಗೆ 10 ಗಂಟೆಗೆ ಮುಂಬೈನ ಹಿರಿಯ ಸಾಹಿತಿ ಡಾ.ಅಮರೇಶ್ ಪಾಟೀಲರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಏಳನೆಯ ರಾಜ್ಯ ಮಟ್ಟದ ಕವಿಕಾವ್ಯ ಸಂಭ್ರಮದಲ್ಲಿ ಖ್ಯಾತ ಕವಯತ್ರಿ ಡಾ.ಲತಾ ರಾಜಶೇಖರ್ ಅವರು, ಹೆಚ್.ಎಸ್.ಶಿವಣ್ಣ ಅವರಿಗೆ ‘ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ’ ಪ್ರದಾನ ಮಾಡುವರು.