ಹಿರಿಯ ಸಹಕಾರಿ ದುರೀಣರಾಗಿದ್ದ ಕೆ.ವಿ.ಶಂಕರಗೌಡ ಮತ್ತು ಜಿ.ಎಸ್.ಬೊಮ್ಮೇಗೌಡ ಹಾಗೂ ಅವರ ಒಡನಾಡಿಗಳ ದೂರದೃಷ್ಠಿಯಿಂದ ಕಳೆದ 75 ವರ್ಷಗಳ ಹಿಂದೆ ಆರಂಭಗೊಂಡಿರುವ ರೈತ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ( ಆರ್.ಎ.ಪಿ.ಸಿ.ಎಂ.ಎಸ್) ಮಂಡ್ಯ ಸಂಸ್ಥೆಯ ಸರ್ವ ಸದಸ್ಯರ ಸಭೆ ಸೆ.23ರಂದು ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಬೆಳಿಗ್ಗೆ 11.30 ಗಂಟೆಗೆ ಆಯೋಜನೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಯು.ಸಿ.ಶೇಖರ್ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 7,738 ಸರ್ವ ಸದಸ್ಯರಿದ್ದು, ಈ ಪೈಕಿ 6,615 ಅರ್ಹ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆ ಕಳಿಸಲಾಗಿದ್ದು, ಅನಿವಾರ್ಯ ಕಾರಣದಿಂದ ಪತ್ರಿಕೆ ತಲುಪದೇ ಇರುವವರು ಇದನ್ನೇ ಆಹ್ವಾನವೆಂದು ತಿಳಿದು ಸಭೆಗೆ ಆಗಮಿಸಿ ಸಲಹೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪ್ರಸ್ತುತ ಆಡಳಿತ ಮಂಡಳಿ ಸಂಘದ ಅಭ್ಯುದಯಕ್ಕೆ ಶ್ರಮಿಸುವ ಸದುದ್ದೇಶದಿಂದ ಹಲವು ಅಭಿವೃದ್ದಿ ಕಾರ್ಯಗಳನ್ನು ಹಾಗೂ ರೈತ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ನೆರವು ನೀಡಬೇಕೆಂದರು.
ಮಂಡ್ಯನಗರದ ಹೃದಯ ಭಾಗದಲ್ಲಿರುವ ಆರ್.ಎ.ಪಿ.ಸಿ.ಎಂ.ಎಸ್ ಸಂಸ್ಥೆಯ ಆವರಣದಲ್ಲಿರುವ ರೈತ ಸಭಾಂಗಣದ ನವೀಕರಣಕ್ಕೆ 68.50 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿದ್ದು, ಸಂಸ್ಥೆ 17 ಲಕ್ಷ ರೂ.ವ್ಯಯಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತ ಸಹಕಾರದಿಂದ ನವೀಕರಣ ಕಾರ್ಯ ಪೂರೈಸುವ ಭರವಸೆ ವ್ಯಕ್ತಪಡಿಸಿದರು.
ಮರಕಾಡನದೊಡ್ಡಿ ಬಳಿ ಇರುವ ಸಂಸ್ಥೆಯ ಬೃಹತ್ ಗೋದಾಮಿನಲ್ಲಿ ರೈತ ಸ್ನೇಹಿ ಯೋಜನೆಗಳಾದ ಬೆಲ್ಲ , ಟಮೋಟೋ ಹಾಗೂ ಎಳನೀರು ಮೌಲ್ಯವರ್ದನೆ ಉದ್ದೇಶಿದಿಂದ 20 ಕೋಟಿ ರೂ. ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಪ್ರಸಕ್ತ ವರ್ಷ ಸಂಸ್ಥೆ 19,97,448 ರೂ. ನಿವ್ವಳ ಲಾಭ ಗಳಿಸಿದ್ದು, ಸಂಸ್ಥೆ ಪ್ರತಿವರ್ಷ 37,46 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ನಿರ್ದೇಶಕರಾದ ಅಂಜನಾ ಶ್ರೀಕಾಂತ್, ಬೇಲೂರು ಸೋಮಶೇಖರ್, ಉದಯ್ ಕುಮಾರ್, ಹೆಚ್.ಎಸ್.ಯೋಗೇಶ್ ಹಾಗೂ ವ್ಯವಸ್ಥಪಕ ಶಂಕರ್ ಉಪಸ್ಥಿತರಿದ್ದರು.