ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ ಜಲಾಶಯಗಳ ವಾಸ್ತವ ಪರಿಸ್ಥಿತಿ ಅವಲೋಕಿಸದೆ ತಮಿಳುನಾಡಿಗೆ ನೀರು ಹರಿಸಿ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಅವೈಜ್ಞಾನಿಕ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆಯಿಲ್ಲದೆ ಬೆಳೆ ಒಣಗುತ್ತಿದ್ದು, ಮಂಡ್ಯ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವು ಮಂಡ್ಯ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಿದ್ದು ಇಂತಹ ಸಂಕಷ್ಟದ ಸ್ಥಿತಿಯಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸದೇ ನೀರು ಬಿಡುವಂತೆ ಸೂಚಿಸಿರುವುದು ಸರಿಯಲ್ಲ ಎಂದರು.
ನಮ್ಮ ತಂದೆ ಜಿ.ಮಾದೇಗೌಡರು ರೈತರ ಹಿತ ಕಾಯುವಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು. ರೈತರಿಗಾಗಿಯೇ ಬದುಕು ಮುಡುಪಿಟ್ಟಿದ್ದರು. ನಾನು ಕೂಡ ತಂದೆಯ ಹೋರಾಟದ ಹಾದಿಯಲ್ಲೇ ಸಾಗುವೆ. ರೈತರೊಂದಿಗೆ ಸದಾ ಇರುವೆ. ಸುಪ್ರೀಂ ತೀರ್ಪಿನ ವಿರುದ್ದ ಬೀದಿಗೆ ಇಳಿಯುತ್ತೇನೆ ಎಂದರು.
ಮಂಡ್ಯ ಜಿಲ್ಲೆಯ ರೈತರ ಹಿತ ಕಾಯಲು ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ನಾನು ಕೂಡ ರೈತರೊಂದಿಗೆ ಇರಲಿದ್ದೇನೆ. ಈ ವಿಚಾರವಾಗಿ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜತೆಗೆ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಚರ್ಚಿಸಿ ಸುಪ್ರೀಂ ತೀರ್ಪಿನ ವಿರುದ್ದ ರೂಪುರೇಷೆ ಸಿದ್ಧ ಪಡಿಸಲಾಗುವುದು ಎಂದರು.
ಕಾವೇರಿ ನೀರು ಸಲಹಾ ಸಮಿತಿಯ ಸದಸ್ಯರು ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ, ಮುಂದಿನ ದಿನಗಳಲ್ಲಿ ಕುಡಿಯಲು ಬೇಕಿರುವ ನೀರಿನ ಪ್ರಮಾಣ, ಬೆಳೆದು ನಿಂತಿರುವ ಬೆಳೆಗಳಿಗೆ ಬೇಕಿರುವ ನೀರಿನ ಪ್ರಮಾಣ ಇದ್ಯಾವುದನ್ನೂ ಪರಿಶೀಲನೆ ಮಾಡದೆ,ಜಲಾನಯನ ಪ್ರದೇಶಗಳಿಗೆ ಭೇಟಿ ಮಾಡಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸದೇ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಭೆ ನಡೆಸಿ ನೀರು ಹರಿಸಿ ಎಂದು ಹೇಳಿದರೆ ಹೇಗೆ ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ನೀರಾವರಿ ಸಲಹ ಸಮಿತಿ ಸದಸ್ಯರು ಅದ್ಯಾವ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದಾರೆ. ತಜ್ಙರೆಲ್ಲ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಈ ರೀತಿಯ ಆದೇಶ ನೀಡಿದ್ದರೆ ಈ ಬಗ್ಗೆ ಒಪ್ಪಬಹುದಿತ್ತು. ಈ ರೀತಿಯ ಆದೇಶದಿಂದ ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಬೇರೆ ರೀತಿಯಲ್ಲಿ ಸಂದೇಶ ಹೋಗಬಹುದು. ಈಗಲೂ ಸುಪ್ರೀಂ ತನ್ನ ಆದೇಶವನ್ನು ಪುನರ್ ಪರಿಶೀಲಿಸಲಿ ಎಂದು ಒತ್ತಾಯಿಸಿದ್ದಾರೆ.