ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಡಾ.ಹೆಚ್.ಡಿ.ಚೌಡಯ್ಯ ಅವರ 96ನೇ ಜನ್ಮದಿನಾಚರಣೆ ಹಾಗೂ 2023ನೇ ಸಾಲಿನ ರಾಜ್ಯಮಟ್ಟದ ಡಾ.ಹೆಚ್.ಡಿ. ಚೌಡಯ್ಯ ಶಿಕ್ಷಣ, ಅಂಕಣ, ಸಾಹಿತ್ಯ ಮತ್ತು ಕ್ರೀಡಾ ಪ್ರಶಸ್ತಿಗಳ ಪ್ರದಾನ ಹಾಗೂ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭವು ಸೆ.25ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ನಿತ್ಯಸಚಿವ ಕೆ.ವಿ. ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಲಿನ ಡಾ.ಹೆಚ್.ಡಿ. ಚೌಡಯ್ಯ ಶಿಕ್ಷಣ ಪ್ರಶಸ್ತಿಗೆ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎಸ್.ಧನಂಜಯ, ಅಂಕಣ ಹಾಗೂ ಸಾಹಿತ್ಯ ಪ್ರಶಸ್ತಿಗೆ ಪ್ರಸಿದ್ದ ಅಂಕಣಕಾರ ಡಾ.ವಿ.ರಂಗನಾಥ್, ಕ್ರೀಡಾ ಪ್ರಶಸ್ತಿಗೆ ಪ್ಯಾರಾ ಒಲಂಪಿಕ್ ಕ್ರೀಡಾಪಟು ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ, ಪ್ರಶಸ್ತಿಯು ತಲಾ ₹20 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ ಎಂದರು.
ಪ್ರತಿಭಾ ಪುರಸ್ಕಾರಕ್ಕೆ ಹೊಳಲು ಸರ್ಕಾರಿ ಶಾಲೆಯ ಮೇಘನಾ ಹೆಚ್.ವಿ, ವಿನಯ್ ಹೆಚ್.ಜೆ, ಹೊಳಲು ಶ್ರೀವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ದೀಕ್ಷಾ ಜೆ ಹಾಗೂ ತೇಜಸ್ ಸಿ.ಜೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿಭಾ ಪುರಸ್ಕಾರವು ತಲಾ ₹2 ಸಾವಿರ ನಗದು ಪುರಸ್ಕಾರವನ್ನೊಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ವಹಿಸುವರು. ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಹಾಗೂ ಧರ್ಮದರ್ಶಿ ಹೆಚ್.ಸಿ.ಮೋಹನ್ ಕುಮಾರ್ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಟ್ರಸ್ಟಿ ಎಂ.ವಿ.ಶ್ರೀಧರ್ ಉಪಸ್ಥಿತರಿದ್ದರು.