ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅವೈಜ್ಞಾನಿಕವಾಗಿದ್ದು ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಆಶಯ್ ಮಧು ಮಾದೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಮದ್ದೂರು ತಾಲ್ಲೂಕಿನ ಸಮೀಪದ ಮೆಳ್ಳಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತಮಿಳುನಾಡಿನ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ನೀರಿನ ಬೇಡಿಕೆ ಇಡುತ್ತಿರುವುದು ರಾಜಕೀಯ ಪ್ರೇರಿತ. ನಮಗೆ ವಾಡಿಕೆಯಷ್ಟು ಮಳೆಯಾಗಿಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲೂ ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಮಳೆ ಬೀಳುವ ಸಾಧ್ಯತೆಗಳು ಕ್ಷೀಣಿಸಿವೆ. ಅಕ್ಟೋಬರ್ ನಿಂದ ಜನವರಿವರೆಗೆ ತಮಿಳುನಾಡಿಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದರು.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧೀಕಾರ ಜಿಲ್ಲೆಯ ಜನರ ವಸ್ತುಸ್ಥಿತಿ ತಿಳಿದು ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಜಿಲ್ಲೆಯ ವಾಸ್ತವ ಸ್ಥಿತಿ ಅವಲೋಕಿಸದೇ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವುದು ಸರಿಯಲ್ಲ. ಈ ಕೂಡಲೇ ಜಿಲ್ಲೆಯ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ತಮ್ಮ ತಾತ ದಿ.ಜಿ.ಮಾದೇಗೌಡರವರು ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರೈತರ ಹಿತ ಕಾಯುತ್ತಿದ್ದರು. ಅದರಂತೆ ನಾನು ಸಹ ರೈತರ ಅಭಿವೃದ್ದಿಗೆ ಹೋರಾಟ ನಡೆಸಲು ಸದಾ ಸಿದ್ದವಿರುತ್ತೇವೆ ಎಂದರು.
ನಮ್ಮ ತಂದೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರವರು ಜಿಲ್ಲೆಯ ರೈತರ ಹಿತಕಾಯಲು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆ.ಆರ್.ಎಸ್.ಅಣೆಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ ಮುಂದಿನ ದಿನಗಳಲ್ಲಿ ಕುಡಿಯಲು ಮತ್ತು ಬೆಳೆದು ನಿಂತಿರುವ ಬೆಳೆಗಳಿಗೆ ನೀರೂಣಿಸಲು ಯಾವುದಕ್ಕೂ ಸಾಲದ್ದಾಗಿದೆ. ಕಾವೇರಿ ನೀರಾವರಿ ಸಲಹಾ ಸಮಿತಿ ಈ ಕೂಡಲೇ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು. ತಮ್ಮ ಆದೇಶವನ್ನು ಪುನರ್ ಪರಿಶೀಲಿಸಿ ತಮಿಳುನಾಡಿಗೆ ನೀರು ಹೋಗುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಕಾರ್ಕಹಳ್ಳಿ ಸ್ವರೂಪ್ಚಂದ್ರ, ಮೆಳ್ಳಹಳ್ಳಿ ವಿನಯ್, ಕೆ.ಟಿ.ಶ್ರೀನಿವಾಸ್, ನಾಗರಾಜು, ರವಿಚಂದ್ರ, ಎಂ.ತಮ್ಮಣ್ಣ, ಎಂ.ಟಿ.ಶ್ರೀನಿವಾಸ್, ರಾಜಣ್ಣ, ಎಂ.ಇ.ಸುನೀಲ್, ಸತೀಶ್, ಕುಮಾರ್, ಪೂಜಾರಿ ಮಹೇಶ್ ಸೇರಿದಂತೆ ಹಲವರಿದ್ದರು.