ವಿವಿಧ ಹಣ್ಣು ಹಂಪಲುಗಳು, ತರಕಾರಿ, ಸೊಪ್ಪುಗಳು ಗರ್ಭಿಣಿ ಮಹಿಳೆಯರ ಪೋಷಣೆಗಾಗಿ, ರಕ್ತ ಹೀನತೆ ತಡೆಗಟ್ಟಲು ಅತ್ಯಂತ ಅಗತ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಬೆನ್ನೂರ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲಹಳ್ಳಿ ವತಿಯಿಂದ ಆಯೋಜಿಸಿದ್ದ “ಪೌಷ್ಠಿಕ ಆಹಾರ ಶಿಬಿರ”ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಗರ್ಭಾವಸ್ಥೆಯಲ್ಲಿ ಮಗುವಿನ ಸರಿಯಾದ ವಿಕಸನ ಮತ್ತು ತಾಯಿಯ ಸರಿಯಾದ ಪೋಷಣೆಗಾಗಿ ಗರ್ಭಿಣಿ ಮಹಿಳೆಯರು ಹಸಿರು ತರಕಾರಿಗಳು, ಕಿತ್ತಳೆ ಹಣ್ಣುಗಳು ಮತ್ತು ಹಾಲನ್ನು ಕುಡಿಯಬೇಕು. ಮಗುವಿನ ಮೊದಲ ಗೋಲ್ಡನ್ ಅವಧಿ ಸಾವಿರ ದಿನಗಳು ಮಹತ್ವದ್ದಾಗಿರುತ್ತದೆ. ತಾಯಿಯು ಸಾಕಷ್ಟು ಪ್ರಮಾಣದಲ್ಲಿ ಮಗುವಿಗೆ ಪೋಷಣೆ ಹಾರೈಕೆ ಮಾಡುವುದರಿಂದ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯು ಮೊದಲ 1000 ದಿನ ಅಂದರೆ 270 ದಿನಗಳ ವರೆಗಿನ ಗರ್ಭಾವಸ್ಥೆಯಲ್ಲಿ, 365 ದಿನಗಳ ಮೊದಲ ವರ್ಷ,365 ದಿನಗಳ 2 ನೆಯ ವರ್ಷ, ಹೀಗೆ ಸಾವಿರ ದಿನಗಳಲ್ಲಿ ಮಗುವಿನ ಬೆಳವಣಿಗೆ ಮತ್ತು ಮೆದುಳು ಬೆಳೆಯಲು ಮತ್ತು ಅಭಿವೃದ್ಧಿಗೊಳ್ಳಲು ಅದರ ಆಜೀವ ಆರೋಗ್ಯಕ್ಕೆ ಅಡಿಪಾಯವನ್ನು ನಿರ್ಮಿಸಲು ಮೊದಲ ಸಾವಿರ ದಿನಗಳು ಅತಿ ಪ್ರಮುಖವಾಗಿದೆ ಎಂದರು.
ಮಗು ಜನಿಸಿದ ಒಂದು ಗಂಟೆ ಒಳಗಾಗಿ ಮಗುವಿಗೆ ತಾಯಿ ಹಾಲು ನೀಡುವುದು ಮುಖ್ಯ. ತಾಯಿಯ ದಪ್ಪವಾದ ಹಾಲು, ಮಗುವಿಗೆ ಪ್ರಥಮ ರೋಗ ನಿರೋಧಕ ಡೋಸ್ ಆಗಿದೆ. ಹಾಗೆಯೇ ಮಗುವನ್ನೂ ಅನೇಕ ರೋಗಗಳಿಂದ ರಕ್ಷಿಸುತ್ತದೆ. 6 ತಿಂಗಳ ವರೆಗೆ ತಾಯಿಯ ಹಾಲು ಮಾತ್ರ ನೀಡುವುದು ನಂತರ ತಾಯಿಯ ಹಾಲಿನ ಜೊತೆ ಪೂರಕ ಆಹಾರ ನೀಡುವುದು, ಮಗು 2 ವರ್ಷ ಆಗುವವರೆಗೆ ತಾಯಿಯ ಹಾಲು ಮುಂದುವರೆಸುವುದು ಪ್ರತಿ ಅಮ್ಮನ ಕರ್ತವ್ಯವಾಗಿದೆ ಎಂದು ತಾಯಂದಿರಿಗೆ ಸಲಹೆ ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಎಸ್.ಎನ್.ತಿಮ್ಮರಾಜು ಮಾತನಾಡಿ, ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿ ಪ್ರತಿಯೊಂದು ಮನೆ, ಪ್ರತಿಯೊಂದು ಗ್ರಾಮವು ತಂಬಾಕು ಮುಕ್ತವಾಗಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ವೈವಿಧ್ಯಮಯ ವಿವಿಧ ಬಗೆಯ ಕಾಳುಗಳು, ಸೊಪ್ಪು ತರಕಾರಿ, ಹಣ್ಣು ಹಂಪಲುಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ ಪಂ ಅಧ್ಯಕ್ಷ ಚಲುವರಾಜ್, ಸದಸ್ಯ ಸಾಗರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಬಿ ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಮಿತ ಟಿ, ಸಮುದಾಯ ಆರೋಗ್ಯ ಅಧಿಕಾರಿ ಸೌಂದರ್ಯ, ಆಶಾ ಕಾರ್ಯಕರ್ತೆಯರಾದ ನಾಗರತ್ನ, ಪಾರ್ವತಿ, ಬಿಂದು, ಭಾಮಾ ಹಾಗೂ ಗರ್ಭಿಣಿಯರು, ಮಕ್ಕಳ ತಾಯಂದಿರು ಹಾಜರಿದ್ದರು.