ಕಾವೇರಿ ವಿಚಾರದಲ್ಲಿ ಹಿಂದಿನಿಂದಲೂ ರಾಜ್ಯವು ಮಲತಾಯಿ ಧೋರಣೆಗೆ ತುತ್ತಾಗಿದೆ, ನಮಗೆ ನಿರಂತರ ಮೋಸ, ದ್ರೋಹ ಮಾಡಲಾಗಿದೆ, ಇಂತಹ ಸ್ಥಿತಿ ಬರಬಾರದು, ವಾಸ್ತವ ಪರಿಸ್ಥಿತಿಯನ್ನು ಸರ್ಕಾರಗಳು, ನ್ಯಾಯಾಲಯಗಳು ಮನವರಿಕೆ ಮಾಡಿಕೊಂಡು, ಇಲ್ಲಿನ ರೈತರನ್ನು ಉಳಿಸಬೇಕೆಂದು ನಟ ವಿನೋದ್ ರಾಜ್ ಹೇಳಿದರು.
ತಮ್ಮ ತಾಯಿ, ಹಿರಿಯ ನಟಿ ಲೀಲಾವತಿಯವರೊಂದಿಗೆ ಸೋಮವಾರ ಮಂಡ್ಯ ನಗರದಲ್ಲಿ ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಕ್ಷೇಮ ಮುಖ್ಯ, ನೀರಿನ ವಿಚಾರದಲ್ಲಿ ಲೆಕ್ಕಾಚಾರವಲ್ಲ, ಕನ್ನಂಬಾಡಿಯಿಂದ ಬೆಂಗಳೂರಿನವರೆಗೆ ಕನ್ನಡಿಗರು ಕಾವೇರಿ ನೀರನ್ನು ಆಶ್ರಯಿಸಿ ಬದುಕುತ್ತಿದ್ದಾರೆ, ಪ್ರಸ್ತುತ ಸನ್ನಿವೇಶದಲ್ಲಿ ಮಳೆಯ ಕೊರತೆಯಿಂದ ನೀರಿನ ಭಾವ ಇದೆ, ವರುಣ ಇನ್ನೂ ಸಹ ಕೃಪೆ ತೋರಿಲ್ಲ, ಕಳೆದ 15 ವರ್ಷದಿಂದ ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ಮಂಡ್ಯ ಜಿಲ್ಲೆಯ ಜನತೆ ಸಾಕಷ್ಟು ನೋವು ಅನುಭವಿಸಿದ್ದಾರೆಂದು ವಿವರಿಸಿದರು.
ಕಾವೇರಿ ಹೋರಾಟ ಜಾತ್ಯತೀತ, ಪಕ್ಷಾತೀತವಾದದ್ದು, ಕಾವೇರಿ ನೀರು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾದದ್ದಲ್ಲ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪರಿಸ್ಥಿತಿಯನ್ನ ಅರಿಯಬೇಕು. ಮುಂದಿನ ದಿನಗಳಲ್ಲಿ ಕುಡಿಯಲು ನೀರಿಲ್ಲದ ಸಂಕಷ್ಟದ ದಿನಗಳು ಎದುರಾಗಲಿವೆ, ಸುಪ್ರೀಂಕೋರ್ಟ್ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ವಾಸ್ತವ ಪರಿಸ್ಥಿತಿಯನ್ನ ಅರಿತು ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ಇಷ್ಟೊಂದು ಹೋರಾಟ ಮಾಡುವ ನಾವು, ಮಳೆ ಬಂದರೆ ಎಲ್ಲವನ್ನು ಮರೆತು ಬಿಡುತ್ತೇವೆ, ಮಳೆ ಬಂದಾಗಲೂ ನೀರು ಇದ್ದಾಗಲೂ ಮುನ್ನೆಚ್ಚರಿಕೆ ವಹಿಸಿ ಮುನ್ನಡೆ ಬೇಕು ಕಾವೇರಿ ವಿಚಾರದಲ್ಲಿ ಸದಾ ಕಾಲ ಜಾಗೃತಿಯಲ್ಲಿರಬೇಕು ಸಲಹೆ ಮಾಡಿದರು.
ಹೋರಾಟಕ್ಕೆ ಆಗಮಿಸಿ ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ಅವರನ್ನು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು.