ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ರೈತರ ಹಿತ ಕಾಪಾಡಬೇಕೆಂದು ಆಗ್ರಹಿಸಿ ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಸಾಥ್ ನೀಡಿದರು.
ಭಾರತೀನಗರದ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಶ್ರೀಚಾಮುಂಡೇಶ್ವರಿ ಆಟೋಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಶ್ರೀಜೈಭುವನೇಶ್ವರ ಆಟೋಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು, ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರ.
ಡಿ.ಸಿ.ತಮ್ಮಣ್ಣ ಮಾತನಾಡಿ, ಕಾವೇರಿಯ ಸಮಸ್ಯೆ ಇಂದಿನ ಸಮಸ್ಯೆಯಲ್ಲ. ಬ್ರಿಟಿಷರ ಮತ್ತು ಮೈಸೂರು ಅರಸರ ಕಾಲದಿಂದಲೂ ಈ ಸಮಸ್ಯೆ ಹಾಗೆಯೇ ಉಳಿದುಕೊಂಡು ಬಂದಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಲ್ಲದಿದ್ದರೆ ಕಾವೇರಿ ನೀರನ್ನು ಹೆಚ್ಚು ಉಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. 1962 ರಲ್ಲಿ ಶಾಸಕರಾಗಿ ಬಂದಾಗ 1963 ರಲ್ಲಿ ಖಾಸಗಿ ನಿರ್ಣಯವನ್ನು ಮಂಡಿಸಿ, ಆಗ ಕಾವೇರಿ ಕೊಳ್ಳದ ನೀರನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕರಿಸಿ ಹೇಮಾವತಿ, ಹಾರಂಗಿ. ಕಬಿನಿ ಡ್ಯಾಮ್ಗಳನ್ನು ನಿರ್ಮಾಣ ಮಾಡಿದರು ಎಂದರು.
ನಮ್ಮ ಜಿಲ್ಲೆಯಲ್ಲಿ ಇಗ್ಗಲೂರು ಡ್ಯಾಮ್ ಸೇರಿದಂತೆ ಅನೇಕ ಯೋಜನೆಗಳಿಗೆ ಕಾರಣರಾಗಿದ್ದಾರೆ. ಇದರಿಂದ ಚನ್ನಪಟ್ಟಣ ಮತ್ತು ಮದ್ದೂರಿನ ರೈತರಿಗೆ ಅನುಕೂಲವಾಗುತ್ತಿದೆ. ಸುಪ್ರೀಂಕೋರ್ಟ್ ನಲ್ಲಿ ಟ್ರಿಬುನಲ್ ಆರ್ಡರ್ ಬಂದಾಗ 14.75 ಟಿ.ಎಂ ನೀರು ರಾಜ್ಯಕ್ಕೆ ಹೆಚ್ಚು ನೀಡಿದ್ದು, ಇದು ದೇವೇಗೌಡರ ಕೊಡುಗೆಯಾಗಿತ್ತು ಎಂದರು.
ಕಾವೇರಿ ಹೋರಾಟಕ್ಕಾಗಿ ದಿ.ಜಿ.ಮಾದೇಗೌಡರು ಸಹ ಶತತ ಹೋರಾಟ ಮಾಡಿಕೊಂಡು ಬಂದಿದ್ದರು. ಈಗ ಅವರು, ಇದಿದ್ದರೆ ಮಾತ್ರ ಚಳುವಳಿ ಮತ್ತಷ್ಟು ಚುರುಕುಗೊಳ್ಳುತ್ತಿತ್ತು ಎಂದು ಸ್ಮರಿಸಿದರು. ನಾನು ಸಹ ಮಂಡ್ಯದಲ್ಲಿ ಕಾವೇರಿ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ಇಂತಹ ಚಳವಳಿಗಳು ಅವಶ್ಯಕವಾಗಿದೆ. ಚಳುವಳಿ ಇಲ್ಲದಿದ್ದರೆ ಸರ್ಕಾರಕ್ಕೆ ಚಾಟಿ ಬೀಸಲು ಸಾಧ್ಯವಾಗುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಆಟೋ ಸಂಘದ ಅಧ್ಯಕ್ಷ ರವಿ, ಕಾರ್ಯದರ್ಶಿ ವೆಂಕಟೇಶ್, ಪದಾಧಿಕಾರಿಗಳಾದ ಸಿದ್ದರಾಮು, ಹರೀಶ್, ಲಕ್ಷ್ಮಣ, ಚಂದ್ರು, ನರಸಿಂಹ, ಜಗದೀಶ್, ಪುಟ್ಟಸ್ವಾಮಿ, ಸಿದ್ದಪ್ಪಾಜಿ, ದಿಲೀಪ್, ಕುಮಾರ್, ಚನ್ನಶೆಟ್ಟಿ, ಕೆ.ಟಿ.ಸುರೇಶ್, ವಿನುಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.