ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಮಂಡ್ಯ ಜಿಲ್ಲೆಯ ಜನತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಒಕ್ಕೊರಲಿನಿಂದ ಗಂಭೀರವಾದ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಇದೇ ಹೋರಾಟವನ್ನು ಪ್ರಚಾರದ ಗೀಳಿಗಾಗಿ ಬಳಸಿಕೊಂಡು ಮಾಧ್ಯಮಗಳ ಗಮನ ಸೆಳೆಯಲು ಬಿಜೆಪಿ ಕಾರ್ಯಕರ್ತನೊಬ್ಬ ನಾನಾ ರೀತಿಯ ಕಸರತ್ತು ನಡೆಸುತ್ತಿರುವುದು ಜಿಲ್ಲೆಯ ಜನತೆಗೆ ಮನೋರಂಜನೆಯಾಗಿ ಕಂಡು ಬಂದಿದೆ.
ಮೊನ್ನೆ ದಿನ ಮಂಡ್ಯನಗರದಲ್ಲಿ ಮಣ್ಣು ತಿಂದು ಪ್ರತಿಭಟಿಸುವುದಾಗಿ ಹೇಳಿಕೊಂಡಿದ್ದ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ, ಮಣ್ಣನ್ನು ಬಾಯಿಗೆ ಹಾಕಿಕೊಂಡು, ನಯವಾಗಿ ಉಳುವ ಮೂಲಕ ಮಾಧ್ಯಮಗಳಲ್ಲಿ ನಗೆಪಾಟಲಿಗೆ ಈಡಾಗಿದ್ದ. ನಿನ್ನೆ ಗುರುವಾರ ಸಗಣಿ ಸುರಿದುಕೊಂಡು ಪ್ರತಿಭಟನೆ ಮಾಡುವ ಪ್ರಹಸನ ನಡೆಸಿ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಇದು ಹೋರಾಟಗಾರರ ಟೀಕೆಗೆ ಗುರಿಯಾಗಿ ನಗೆಪಾಟಲಿಗೆ ಈಡಾಗಿತ್ತು.
ಎರಡು ತಟ್ಟೆ ಮೆಣಸಿನಕಾಯಿ ತಿನ್ನುವುದಾಗಿ ಹೇಳಿ ನಾಲ್ಕು ಮೆಣಸಿನಕಾಯಿ ತಿಂದ !
ಕಾವೇರಿ ಅನ್ಯಾಯಕ್ಕಾಗಿ ಶುಕ್ರವಾರ ಜಿಲ್ಲೆಯಾದ್ಯಂತ ಜನರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರೆ, ಮತ್ತೊಂದು ಕಡೆ ವಿನೂತನ ಪ್ರಚಾರದ ಗಿಮಿಕ್ ಮಾಡಿದ ಶಿವಕುಮಾರ ಆರಾಧ್ಯ, ಕಾವೇರಿ ಅನ್ಯಾಯವನ್ನು ಖಂಡಿಸಿ 2 ತಟ್ಟೆ ಹಸಿರು ಮೆಣಸಿನಕಾಯಿಯನ್ನು ತಿನ್ನುತ್ತೇನೆಂದು ಹೇಳಿಕೊಂಡು ಮಾಧ್ಯಮಗಳಿಗೆ ಪೋಸು ನೀಡಿ ನಾಟಕವಾಡಿ , ಕೇವಲ 4 ಮೆಣಸಿನಕಾಯಿಯನ್ನು ತಿನ್ನುವಂತೆ ಬಾಯಿಯಲ್ಲಿ ಹಾಕಿಕೊಂಡು ಅಗಿದು ಉಗಿಯುವ ಮೂಲಕ ಮಾಧ್ಯಮಗಳಲ್ಲಿ ಸುಲಭವಾಗಿ ಪ್ರಚಾರ ಗಿಟ್ಟಿಸಿಕೊಂಡ.
ಮೂರು ದಿನಗಳಿಂದ ಈತನ ಅಗ್ಗದ ಪ್ರಚಾರದ ಗೀಳನ್ನು ಕಂಡ ನೈಜ್ಯ ಕಾವೇರಿ ಹೋರಾಟಗಾರರು, ಪ್ರಚಾರಕ್ಕಾಗಿ ಈ ವ್ಯಕ್ತಿ ದಿನಕ್ಕೊಂದು ತಂತ್ರ ಮಾಡುತ್ತಿದ್ದಾನೆ, ನಮ್ಮ ಮಾಧ್ಯಮಗಳು ಕೂಡ ನೈಜ್ಯ ಹೋರಾಟಗಾರರು ಬಿಟ್ಟು, ಇಂತಹ ಪ್ರಚಾರ ಪ್ರಿಯರಿಗೆ ಮಣೆ ಹಾಕುತ್ತಿವೆ ಎಂದು ಕಿಡಿಕಾರಿದ್ಧಾರೆ.
ಕಾವೇರಿ ಹೋರಾಟಕ್ಕೆ ಉತ್ತಮ ಇತಿಹಾಸವಿದೆ
ಮಂಡ್ಯದಲ್ಲಿ ಇದುವರೆಗೆ ನಡೆದಿರುವ ಕಾವೇರಿ ಹೋರಾಟಗಳಿಗೆ ಉತ್ತಮವಾದ ಇತಿಹಾಸವಿದೆ, ಅದರಲ್ಲೂ ಹುಟ್ಟು ಹೋರಾಟಗಾರ ಜಿ.ಮಾದೇಗೌಡ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟ ಎಂದಿಗೂ ಚಿರಸ್ಥಾಯಿಯಾಗಿದೆ. ಹೀಗಿರುವಾಗ ಕಾವೇರಿ ಹೋರಾಟವನ್ನು ತನ್ನ ಪ್ರಚಾರದ ಗೀಳಿಗಾಗಿ ಬಳಸಿಕೊಳ್ಳುತ್ತಿರುವ ಈ ಬಿಜೆಪಿ ಕಾರ್ಯಕರ್ತನ ನಡೆ ನೈಜ್ಯ ಹೋರಾಟಗಾರಿಗೆ ಇರಿಸು-ಮುರಿಸು ತಂದಿಟ್ಟಿದೆ, ಒಟ್ಟಿನಲ್ಲಿ ಕಾವೇರಿ ಹೋರಾಟದಲ್ಲಿ ಮಾಧ್ಯಮಗಳ ಗಮನ ಸೆಳೆಯಲು ದಿನಕ್ಕೊಂದು ವೇಷ ಹಾಕುತ್ತಿರುವ ಶಿವಕುಮಾರ್ ಆರಾಧ್ಯ, ಇಡೀ ಕಾವೇರಿ ಹೋರಾಟದಲ್ಲಿ ಹಾಸ್ಯದ ವಸ್ತುವಾಗಿ ಗೋಚರಿಸಿದ್ದಾನೆ.