ಚಿಕ್ಕಮಂಡ್ಯ ಬಳಿಯಿದ್ದ 5 ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸೋಮವಾರ ರಾತ್ರಿಯಿಡಿ ನಡೆಯಿತಾದರೂ ಮುಂಜಾನೆ 3 ಗಂಟೆ ವೇಳೆಗೆ ಭೂತನಹೊಸೂರು ಗ್ರಾಮದ ಹೆಬ್ಬಾಳದವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಬಳಿಕ ಅಧಿಕಾರಗಳ ಕಣ್ತಪಿಸಿ 10 ಕಿ.ಮೀ ದೂರದ ತಾಲ್ಲೂಕಿನ ಕಟ್ಟೆದೊಡ್ಡಿ ಗ್ರಾಮದವರೆಗೆ ತಲುಪಲಷ್ಟೇ ಸಾಧ್ಯವಾಗಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ಕಟ್ಟೆದೊಡ್ಡಿ ಗ್ರಾಮದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ನೋಡಲು ಜನರು ಮುಗಿ ಬಿದ್ದಿದ್ದಾರೆ.
ಸೋಮವಾರ ರಾತ್ರಿ ಕಾರ್ಯಾಚರಣೆ ವೇಳೆ ಬೂದನೂರು ರೈಲ್ವೇ ಟ್ರಾಕ್ ಬಳಿ ಸಿಕ್ಕಿ ಹಾಕಿಕೊಂಡು ಆನೆಗಳು ಕೆಲ ಕಾಲ ಕಾರ್ಯಾಚರಣೆ ತಡವಾಯಿತು. ಮರಿ ಆನೆಯೊಂದು ಇರುವ ಕಾರಣ ಕಾಡಿಗಟ್ಟುವ ಕಾರ್ಯಾಚರಣೆ ವಿಳಂಬವಾಗುತ್ತಿದೆ.
ಬೆಂಗಳೂರಿನಿಂದ ಆಗಮಿಸಿರುವ ಇಸ್ರೇಲ್ ತಂತ್ರಜ್ಞಾನ ಪರಿಣತ ಅಧಿಕಾರಿಗಳ ತಂಡ ಆನೆ ಕಾಡಿಗಟ್ಟುವ ಕುರಿತು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಶಾಸಕ ರವಿಕುಮಾರ್ ಗೌಡ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಕಾರ್ಯಾಚರಣೆ ವೇಳೆ ಉಸ್ತುವಾರಿ ನೋಡಿಕೊಂಡರು. ಬೆಳಿಗ್ಗೆ 9 ಗಂಟೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಚೈತ್ರಾ ಹಾಗೂ ಸಿಬ್ಬಂದಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.