ದೇಶದ ವಿವಿಧೆಡೆ ನಡೆಯುತ್ತಿರುವ ಅತ್ಯಾಚಾರಗಳನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ಮಾಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಒತ್ತು ನೀಡಬೇಕೆಂದು ಆಗ್ರಹಿಸಿ ಮಹಿಳಾ ಮುನ್ನಡೆ ಹಾಗೂ ಅತ್ಯಾಚಾರ ವಿರೋಧಿ ಆಂದೋಲನ |ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮಂಗಳವಾರ ಹಕ್ಕೊತ್ತಾಯ ಪತ್ರ ಸಲ್ಲಿಸಿತು.
ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್, ಅತ್ಯಾಚಾರ ವಿರೋಧಿ ಆಂದೋಲನದ ಮುಖಂಡರಾದ ಪೂರ್ಣಿಮ, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮಂಜುಳ ಅವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಇರುವ ಕಾಯ್ದೆಗಳನ್ನ ಇನ್ನಷ್ಟೂ ಬಲಗೊಳಿಸಿ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಮಾರ್ಗಸೂಚಿ ನೀಡಬೇಕು. ಅತ್ಯಾಚಾರ ಪ್ರಕರಣಗಳು ನಡೆಯದಂತೆ ತಡೆಯಲು ಸಮಾಜದಲ್ಲಿ ಅರಿವಿನ ಅಗತ್ಯವಿದ್ದು, ಸಮಾಜದ ಜನರಲ್ಲಿ ಜಾಗೃತಿ ಮೂಡುಸುವ ಕೆಲಸಗಳು ಹೆಚ್ಚಾಗಬೇಕು, ಈ ನಿಟ್ಟಿನಲ್ಲಿ ನಿರ್ಭಯ ನಿಧಿಯನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲೆ ರಾಜ್ಯದಲ್ಲಿ ಹೊಸದಾಗಿ1000 ಮದ್ಯದಂಗಡಿ ತೆರೆಯಲು ಪರವಾನಗಿ ನೀಡುತ್ತಿರುವುದನ್ನು ನಿಲ್ಲಿಸಿ ಮಧ್ಯ ನಿಷೇಧಕ್ಕೆ ಒತ್ತು ಕೊಡಬೇಕೆಂದು ಆಗ್ರಹಿಸಿದರು.
ಮಧ್ಯಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ರಕ್ತಸಿಕ್ತ ದೇಹದೊಂದಿಗೆ ಅರೆ ಬೆತ್ತಲೆಯಾಗಿ ಬೀದಿಯಲ್ಲಿ ನಡೆದಾಡುತ್ತಾ ಬಾಲಕಿ ಸಹಾಯಕ್ಕಾಗಿ ಅಂಗಲಾಚಿದರು. ಸ್ಪಂದಿಸಲಾಗದಷ್ಟು ಸಮಾಜ ಕಲ್ಲಾಗಿದೆ. ಸೆಪ್ಟೆಂಬರ್ 9 ರಂದು ಅಸ್ಸಾಂನಲ್ಲಿ 15 ವರ್ಷದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವದ ಜೊತೆಗೆ ಮೂವರು ದುಷ್ಕರ್ಮಿಗಳು ಅತ್ಯಾಚಾರ ವೆಸಗಿದ್ದಾರೆ. ಧರ್ಮಸ್ಥಳದ ಸೌಜನ್ಯ ಪ್ರಕರಣ ನಡೆದು 11 ವರ್ಷಗಳೇ ಕಳೆದರೂ ಇನ್ನೂ ನ್ಯಾಯ ದೊರಕಿಲ, ಬದಲಿಗೆ ಪ್ರಕರಣವನ್ನೇ ಹಳ್ಳ ಹಿಡಿಸಿ ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಮಣಿಪುರದಲ್ಲಿ ಹಾಡ ಹಗಲೇ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಕ್ರೌರ್ಯ ಮೆರೆದಿದೆ, ಮಣಿಪುರದಲ್ಲಿ ಇಂದಿಗೂ ಹಿಂಸಾಚಾರ ಕೊನೆಯಾಗಿಲ್ಲ, ಅಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಎನ್ ಸಿಆರ್ ಬಿ ವರದಿ ಪ್ರಕಾರ ದಿನವೊಂದರಲ್ಲಿ ಸುಮಾರು 80 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಅತ್ಯಾಚಾರ, ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಹೀಗಿರುವಾಗ ಗಾಂಧೀಜಿಯ ಕನಸಿನ ಸಮಾಜ ನಿರ್ಮಾಣವಾಗುವುದು ಎಂದಿಗೆ ? ರಾಜ್ಯ ಸರ್ಕಾರ, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಒಂದು ಸಾವಿರ ಮಧ್ಯದ ಅಂಗಡಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆಯಲು ಪರವಾನಿಗೆ ನೀಡುವ ಪ್ರಸ್ತಾವನೆಯನ್ನು ಇಟ್ಟಿದೆ, ಇದರ ಜೊತೆಗೆ ಅಬಕಾರಿ ತೆರಿಗೆ ಹೆಚ್ಚಿಸುವ ಗುರಿಯನ್ನು ಅಬಕಾರಿ ಅಧಿಕಾರಿಗಳಿಗೆ ನೀಡಿದೆ. ಕಲ್ಯಾಣ ಸಮಾಜ ರೂಪಿಸುವ ಸಲುವಾಗಿ ಕರ್ಚು ವೆಚ್ಚವನ್ನು ಹೆಂಡ ಮಾರಿ ಬರುವ ತೆರಿಗೆ ಹಣದಿಂದ ಹೊಂದಿಸುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ, ಇದು ನಾಚಿಕೆ ಗೇಡಿನ ವಿಚಾರ ಎಂದು ಹಕ್ಕೊತ್ತಾಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಒಂದು ಕೈಯಲ್ಲಿ ಹೆಣ್ಣು ಮಕ್ಕಳಿಗೆ ಹಣ ಕೊಟ್ಟು, ಮತ್ತೊಂದು ದಿಕ್ಕಿನಲ್ಲಿ ಅವರ ಬದುಕನ್ನೇ ಮೂರಾ ಬಟ್ಟೆ ಮಾಡುವ ಯೋಜನೆ ಇದು, ಇಂತಹ ಪಾಪದ ತೆರಿಗೆಯಿಂದ ಯಾವುದೇ ಕಾರಣಕ್ಕೂ ಕಲ್ಯಾಣ ಸಮಾಜ ರೂಪಿಸಲು ಸಾಧ್ಯವೇ ಇಲ್ಲ. ಇದು ನಾಗರಿಕರ ಆರೋಗ್ಯ ಹಾಳು ಮಾಡುವುದಲ್ಲದೆ ಸಮಾಜದ ಆರೋಗ್ಯವನ್ನು ಹಾಳುಮಾಡುತ್ತದೆ. ಇಂತಹ ಪಾಪದ ಕೆಲಸ ಮಾಡಲು ಹೊರಟಿರುವ ಸರ್ಕಾರಗಳಿಗೆ ಗಾಂಧಿ ಜಯಂತಿಯನ್ನು ಆಚರಿಸುವ ನೈತಿಕತೆ ಇದೆಯೇ..? ಪ್ರಶ್ನಿಸಲಾಗಿದೆ.