ಮಂಡ್ಯ-ಮೇಲುಕೋಟೆ ರಸ್ತೆ ಅಭಿವೃದ್ಧಿ ಹಾಗೂ ಹೊಳಲು ಗ್ರಾಮದ ದೊಡ್ಡಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.
ದರ್ಶನ್ ಪುಟ್ಟಣ್ಣಯ್ಯ ಯುವಬ್ರಿಗೇಡ್, ಜೀವಧಾರೆ ಟ್ರಸ್ಟ್ ವತಿಯಿಂದ ತಾಲೂಕಿನ ದೊಡ್ಡಮ್ಮತಾಯಿ ದೇವಸ್ಥಾನದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಹುಟ್ಟುಹಬ್ಬವನ್ನು ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಲಹೆ ನೀಡಿದ್ದು, ಅದರಂತೆ ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಮಾಡಿರುವುದು ಶ್ಲಾಘನೀಯ ಎಂದರು.
ಯಾರದ್ದೇ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಹಣ ಪೋಲು ಮಾಡಿ ಮಾಡುವುದನ್ನು ಬಿಟ್ಟ, ಶ್ರಮಧಾನ, ರಕ್ತದಾನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮ ಗಳನ್ನು ಮಾಡಿದರೆ ಜನರಿಗೂ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಮುಖಂಡ ನಂದೀಶ್ ಮಾತನಾಡಿ, ಶಾಸಕರ ಮಾರ್ಗದರ್ಶನದಂತೆ ಮಿಮ್ಸ್ನಲ್ಲಿ ರಕ್ತದಾನ, ಮಮತೆಯ ಮಡಿಲುನಲ್ಲಿ ಅನ್ನದಾನ, ರೋಗಿಗಳಿಗೆ ಹಣ್ಣು, ಉಪಹಾರ ವಿತರಿಸಲಾಯಿತು. ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಹೇಳಿದರು.
ಅಕ್ಕಪಕ್ಕದ ಗ್ರಾಮಗಳಾದ ಚಂದಗಾಲು, ಮಲ್ಲನಾಯಕನಕಟ್ಟೆ, ಚಂದಗಾಲು, ಶಿವಳ್ಳಿ, ಗಾಣದಾಳು ಸೇರಿದಂತೆ ಹಲವು ಗ್ರಾಮದ ಮುಖಂಡರು ದರ್ಶನ್ ಪುಟ್ಟಣ್ಣಯ್ಯ ಅವರನ್ನು ಅಭಿನಂದಿಸಿದರು.
ದರ್ಶನ್ ಪುಟ್ಟಣ್ಣಯ್ಯ ಯುವ ಬ್ರಿಗೇಡ್ನ ಚಂದನ್, ಶ್ಯಾಮ್, ಚೇತನ್, ಹರ್ಷ, ಪಟೇಲ್ ರಾಮು, ಗ್ರಾ.ಪಂ. ಮಾಜಿ ಅಧ್ಯಕ್ಷ ಅಭಿನಂದನ್, ಎಚ್.ಸಿ. ಅಭಿ, ವಿನುತ, ಲಿಂಗರಾಜಮ್ಮ, ಮಿಮ್ಸ್ನ ರಕ್ತನಿಧಿ ಕೇಂದ್ರದ ಮೊಹಮ್ಮದ್ ರಫಿ, ಷರೀಫ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.