ಕಾವೇರಿ ನೀರು ಹಂಚಿಕೆ ಸಂಬಂಧ ರಾಜ್ಯಗಳ ನಡುವೆ ವಿವಾದ ಇರುವುದರಿಂದ ಯಾವುದೇ ವ್ಯಕ್ತಿ, ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶನ ಮಾಡಿರುವುದರಿಂದ ಯಾರೇ ಅರ್ಜಿ ಸಲ್ಲಿಸಿದರು ವಜಾ ಆಗಲಿದೆ, ಹಾಗಾಗಿ ಸರ್ಕಾರವೇ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಮುಂದಾಗಬೇಕೆಂದು ನೀರಾವರಿ ತಜ್ಞ ಅರ್ಜುನ ಹಳ್ಳಿ ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾವೇರಿ ಅಂತಿಮ ತೀರ್ಪನ್ನು ಒಪ್ಪಿಕೊಂಡಿರುವುದರಿಂದ ಸಂವಿಧಾನ ಬದ್ಧವಾಗಿ ಇರುವ ಅವಕಾಶ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅಂತರ್ಗತ ಅಧಿಕಾರವಿದ್ದು, ವಿವೇಚನೆ ಬಳಸಿ, ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸಿವಂತೆ ಕೋರಬಹುದಾಗಿದೆ ಎಂದರು.
ಈ ವಿಚಾರದಲ್ಲಿ ರಾಷ್ಟ್ರಪತಿಯವರಿಗೆ ವಿಶೇಷ ಅಧಿಕಾರ ಇದ್ದು, ಅವರಿಗೆ ನ್ಯಾಯ ಕೋರಿದರೆ ಕಾವೇರಿ ವಿವಾದ ಸಂಬಂಧ ನಾಲ್ಕು ರಾಜ್ಯಗಳ ಪ್ರದೇಶದಲ್ಲಿ ಅಧ್ಯಯನ ಮಾಡಲು ಸಮಿತಿ ರಚಿಸಿದರೆ. ಸಮಿತಿಯ ವರದಿ ಆಧಾರದ ಮೇಲೆ ತೀರ್ಮಾನ ಮಾಡುವ ಅವಕಾಶವಿದೆ ಎಂದರು.
ಕಾವೇರಿ ತೀರ್ಪಿನಲ್ಲಿ ಲೋಕಸಭೆ, ರಾಜ್ಯಸಭೆ ಮಧ್ಯ ಪ್ರವೇಶ ಮಾಡುವಂತಿಲ್ಲ, ಇಂತಹ ಕಾನೂನು ತೊಡಕುಗಳಿವೆ, ರಾಷ್ಟ್ರೀಯ ಜಲನೀತಿ ಇಲ್ಲದಿರುವುದರಿಂದ ಜಲವಿವಾದ ಇತ್ಯರ್ಥ ಸಾಧ್ಯವಿಲ್ಲ, ತಮಿಳುನಾಡಿನ ಒತ್ತಡಕ್ಕೆ ಮಣಿದು ಇದುವರೆಗೂ ರಾಷ್ಟ್ರೀಯ ಜಲ ನೀತಿ ರೂಪಿಸಿಲ್ಲ ಎಂದು ದೂರಿದರು.