ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಮಾಣಿಕ್ಯನಹಳ್ಳಿ ಗ್ರಾಮದಲ್ಲಿ 90ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯ ಪೈಪ್ಲೈನ್ ಅಳವಡಿಕೆಗಾಗಿ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರು ದೊರಕುತ್ತದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕಳಪೆ ಕಾಮಗಾರಿ ನಿರ್ವಹಿಸದೆ ಉತ್ತಮ ಕೆಲಸ ಮಾಡಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ರವಿ, ಸದಸ್ಯರಾದ ದ್ಯಾವಶೆಟ್ಟಿ, ಸಿ.ಬಿ.ಮಹೇಶ, ನಂದಿನಿ ಮಹಂತೇಶ, ಶಾಂತಮ್ಮ, ಜಲಬೋರೇಗೌಡ, ಮರಿಗೌಡ, ಜಿ.ಇ.ರಮೇಶ, ಮಾಜಿ ಅಧ್ಯಕ್ಷರಾದ ಅನಿತಾರಾಣಿ, ಎಂ.ಎಸ್.ಕುಮಾರ್, ಮುಖಂಡರಾದ ಶಿವನಂಜು, ಜಯಂತ್ ಗೌಡ, ಸುಮಂತ್ ಗೌಡ, ಮಹಾಂತೇಶ, ನವೀನ್, ಗುತ್ತಿಗೆದಾರ ಪುಟ್ಟೇಗೌಡ ಇತರರು ಇದ್ದರು.